ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಳಿಕೆಯಿಂದಲೂ ನಡೆಯಿತು ಸೃಷ್ಟಿಕಾರ್ಯ

Last Updated 31 ಜುಲೈ 2018, 12:35 IST
ಅಕ್ಷರ ಗಾತ್ರ

ಸೃಷ್ಟಿ ಎನ್ನುವುದೇ ಸಮಗ್ರತೆ, ಪೂರ್ಣತೆ. ವಿಷ್ಣುವಿನ ಸಮಗ್ರ ಸ್ವರೂಪವು ನಾಲ್ಕು ಅಂಶಗಳ ಮೂಲಕ ಲೋಕದಲ್ಲಿ ಪ್ರಕಟವಾಗಲು ಭೂಮಿಕೆ ಸಿದ್ಧವಾಗಿದೆ. ಆದರೆ ವಿಷ್ಣುವಿನ ಅವತಾರಕಾರ್ಯ ಪೂರ್ಣವಾಗಲು ಪೂರಕಸೃಷ್ಟಿಯೂ ನಡೆಯಬೇಕು. ಏಕಾಂಕನಾಟಕವೇ ಆದರೂ ಅದನ್ನು ಪ್ರದರ್ಶಿಸಲು ಹಲವರು ಪಾತ್ರಧಾರಿಗಳಾಗಬೇಕಷ್ಟೆ! ಇಡಿಯ ಸೃಷ್ಟಿಯೇ ದೇವರಿಗೆ ಒಂದು ನಾಟಕವಿದ್ದಂತೆ ಎನ್ನುತ್ತದೆ ಪರಂಪರೆ. ಹೀಗಿರುವಾಗ ಈ ನಾಟಕದಲ್ಲಿ ಪೋಷಕಪಾತ್ರಗಳಿಲ್ಲದಿದ್ದರೆ ಹೇಗೆ?

ದಶರಥನ ಮಗನಾಗಿ ಹುಟ್ಟಲು ವಿಷ್ಣು ಸಂಕಲ್ಪಮಾಡಿದ ಕೂಡಲೇ ಬ್ರಹ್ಮದೇವನು ಮತ್ತೊಂದು ದೇವಸಭೆಯನ್ನು ಕರೆದ. ಅವನು ದೇವತೆಗಳನ್ನು ಉದ್ದೇಶಿಸಿ ಹೀಗೆಂದ:

‘ಎಲೈ ದೇವತೆಗಳೇ! ಮಹಾವಿಷ್ಣುವಿಗೆ ಸಹಾಯಮಾಡಲು ನೀವೆಲ್ಲರೂ ಕೂಡ ಸೃಷ್ಟಿಕಾರ್ಯದಲ್ಲಿ ಭಾಗಿಯಾಗಬೇಕಿದೆ. ಬಲಶಾಲಿಗಳೂ ಕಾಮರೂಪಿಗಳೂ ಆದವರನ್ನು ನೀವೆಲ್ಲರೂ ಸೃಷ್ಟಿಸಿರಿ. ಅವರೆಲ್ಲರೂ ಶೌರ್ಯದಲ್ಲಿ ವಿಷ್ಣುವಿಗೆ ಸಮನಾಗಿರಬೇಕು; ನೀತಿಜ್ಞರೂ ಬುದ್ಧಿಸಂಪನ್ನರೂ ಆಗಿರಬೇಕು. ಅಮೃತಪಾನಮಾಡಿದವರಷ್ಟು ಬಲಶಾಲಿಗಳೂ ಆಗಿರಬೇಕು. ಅಪ್ಸರೆಯರು, ಗಂಧರ್ವಿಯರು, ಯಕ್ಷಸ್ತ್ರೀಯರು, ನಾಗಕನ್ಯೆಯರೂ – ಹೀಗೆ ಎಲ್ಲ ರೀತಿಯ ಜೀವಿಗಳಲ್ಲೂ ಇಂಥ ಬಲಶಾಲಿಗಳು ಹುಟ್ಟಬೇಕು. ಈಗಾಗಲೇ ನಾನು ಜಾಂಬವಂತನನ್ನು ಸೃಷ್ಟಿಸಿದ್ದೇನೆ. ನಾನು ಆಕಳಿಸುವಾಗ ಹುಟ್ಟಿದವನು ಅವನು’.

ಆಕಳಿಕೆಯಿಂದ ಸೃಷ್ಟಿಕಾರ್ಯ ಸಾಧ್ಯವೆ? ಏನಿದು ವಿಚಿತ್ರ? ಇಂಥ ಪ್ರಶ್ನೆಗಳು ಹುಟ್ಟುವುದು ಸಹಜವೆನ್ನಿ! ಇಡಿಯ ಪುರಾಣಪ್ರಪಂಚದಲ್ಲಿ ಇಂಥ ‘ವೈಚಿತ್ರ್ಯ’
ಗಳಿಗೆ ಕೊರತೆಯಿಲ್ಲವಷ್ಟೆ!

ನಮ್ಮ ತರ್ಕವನ್ನು ಮೀರಿದ ವಿವರವೇ ಸೃಷ್ಟಿಕಾರ್ಯ, ಋತವ್ಯವಸ್ಥೆ – ಎನ್ನುವುದನ್ನು ಅವಕಾಶ ಸಿಕ್ಕಾಗಲೆಲ್ಲ ಪುರಾಣಗಳು ಪ್ರಕಟಿಸುತ್ತಲೇ
ಇರುತ್ತವೆಯೆನ್ನಿ! ಇದನ್ನು ನಾವು ಗಮನಿಸದೆ ತಮ್ಮ ತರ್ಕದ ಮಿತಿಯೊಳಗೆ ಅವನ್ನು ತುರುಕಿ, ವಿಕಾರಗೊಳಿಸುತ್ತಿರುತ್ತೇವೆಯಷ್ಟೆ! ಬ್ರಹ್ಮನಿಗೆ ಸೃಷ್ಟಿ ಎನ್ನುವುದು ಎಷ್ಟು ಸಹಜ, ಎಷ್ಟು ಸುಲಭ ಎನ್ನುವುದನ್ನು ಜಾಂಬವಂತನ ಸೃಷ್ಟಿ ಧ್ವನಿಸುತ್ತಿದೆ. ಆಕಳಿಕೆ ಬರುವುದೇ ನಿದ್ರೆಗೆ ಮುನ್ಸೂಚನೆ ಅಲ್ಲವೆ? ಬ್ರಹ್ಮನಿಗೇ ಆಕಳಿಕೆ ಎಂದರೆ ಏನು? ಅವನಿಗೂ ನಿದ್ರೆ ಬರುತ್ತಿದೆ ಎಂದು ಅರ್ಥವೆ? ಬ್ರಹ್ಮನ ನಿದ್ರೆ ಎಂದರೆ ಮತ್ತೊಂದು ಯುಗದ ಆರಂಭಕ್ಕೆ ನಾಂದಿಯಲ್ಲದೆ ಮತ್ತೇನು? ಹೀಗಾಗಿ ರಾಮಾವತಾರ ಎನ್ನುವುದು ಹೊಸ ಯುಗ ಎನ್ನುವುದರ ಸೂಚನೆಯನ್ನು ಇಲ್ಲಿ ಕಾಣಬಹುದು.

* * *

ಬ್ರಹ್ಮನ ಆಜ್ಞೆಯಂತೆ ಯಾರೆಲ್ಲರೂ ಈ ಸೃಷ್ಟಿಕಾರ್ಯದಲ್ಲಿ ಪಾಲ್ಗೊಂಡರು; ಯಾರೆಲ್ಲರನ್ನು ಸೃಷ್ಟಿಸಿದರು ಎನ್ನುವ ವಿವರಗಳು ಸ್ವಾರಸ್ಯಕರವಾಗಿವೆ.

ವಾನರರೂಪಿಗಳಾದ ಮಕ್ಕಳನ್ನು ದೇವತೆಗಳು ಸೃಷ್ಟಿಸಿದರಂತೆ. ಕೇವಲ ದೇವತೆಗಳಿಂದ ಮಾತ್ರವೇ ವಾನರರ ಸೃಷ್ಟಿಯಾಗಲಿಲ್ಲ; ಋಷಿಗಳು, ಸಿದ್ಧರು, ವಿದ್ಯಾಧರರು, ಪನ್ನಗರು, ಚಾರಣರೂ ವೀರರಾದ ವಾನರರನ್ನು ಸೃಷ್ಟಿಸಿದರು. ಇಂದ್ರನು ತನ್ನಷ್ಟೇ ಪರಾಕ್ರಮಶಾಲಿಯಾದ ವಾಲಿಯನ್ನು ಸೃಜಿಸಿದ. ಸೂರ್ಯನು ಹೀಗೆಯೇ ಸುಗ್ರೀವನನ್ನು ಉಂಟುಮಾಡಿದ. ಬೃಹಸ್ಪತಿಯ ಮಗನೇ ತಾರನೆಂಬ ಮಹಾಕಪಿ; ಇವನು ಮುಂದೆ ಸಕಲ ಕಪಿಗಳಲ್ಲಿ ಅತ್ಯಂತ ಬುದ್ಧಿವಂತ ಎನಿಸಿದವ. ವಿಶ್ವಕರ್ಮನ ಮಗನೇ ನಳ. ನೀಲ ಅಗ್ನಿಯ ಮಗ. ಅಶ್ವಿನಿದೇವತೆಗಳಿಂದ ಹುಟ್ಟಿದವರೇ ಮೈಂದದ್ವಿವಿದರು. ವರುಣನು ಸುಷೇಷನನ್ನು ಉತ್ಪಾದಿಸಿದರೆ, ಪರ್ಜನ್ಯನು ಶರಭನನ್ನು ಉತ್ಪಾದಿಸಿದ. ವಾಯುದೇವನಿಂದ ಸೃಷ್ಟಿಯಾದವನೇ ಹನುಮಂತ. ಅವನು ಇಡಿಯ ವಾನರರಲ್ಲಿಯೇ ತುಂಬ ವಿಶಿಷ್ಟನಾದವನು. ಅವನು ವಜ್ರಕಾಯ; ಗರುಡನಂತೆ ವೇಗಶಾಲಿ. ಅವನು ಬಲದಲ್ಲೂ ಬುದ್ಧಿಯಲ್ಲೂ ಶ್ರೇಷ್ಠನಾದವನು. ಹೀಗೆ ರಾವಣವಧೆಗೆ ವಿಷ್ಣುವಿಗೆ ಸಹಾಯ ಮಾಡಲು ಸಾವಿರಾರು ವಾನರರು ದೈವಾಂಶದಿಂದ ಸೃಷ್ಟಿಯಾದರು.

ಈ ಸೃಷ್ಟಿಕಾರ್ಯದಲ್ಲಿ ಗಮನಿಸಬೇಕಾದ ಅಂಶ ಎಂದರೆ ಇಡಿಯ ದೇವತೆಗಳ ಅಂಶಗಳು ಭೂಲೋಕದಲ್ಲಿ ಅವತರಿಸಿದ್ದು. ಭೂಲೋಕವೂ ದೇವಲೋಕದ ವಿಸ್ತರಣವೇ ಹೌದು; ಅಥವಾ ಭೂಲೋಕದ ವಿಸ್ತರಣವೇ ದೇವಲೋಕ –ಎಂಬ ಸಿದ್ಧಾಂತಕ್ಕೆ ಈ ಸೃಷ್ಟಿಕಾರ್ಯ ನಿದರ್ಶನವಾಗಿದೆ. ‘ಆರಂಭದಲ್ಲಿ ದೇವತೆಗಳು ಮಾಡಿದ್ದನ್ನೇ ಈಗ ಮನುಷ್ಯರೂ ಮಾಡುತ್ತಿರುವುದು’ – ಎಂಬ ಒಕ್ಕಣೆಯೂ ಉಂಟು. ‘We must do what the Gods did first’ ಎಂಬ ಮಾತನ್ನು ಆನಂದ ಕುಮಾರಸ್ವಾಮಿ ಉದ್ಧರಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ‘We cannot know the reflection of anything unless we know itself’ ಎಂಬ ಮಾತನ್ನು ಕೂಡ ಅವರು ಉಲ್ಲೇಖಿಸಿದ್ದಾರೆ. ಎಂದರೆ ನಮ್ಮಲ್ಲಿರುವ ಚೈತನ್ಯದ ಅರಿವಾಗಬೇಕಾದರೆ ಮೊದಲಿಗೆ ನಾವೆಲ್ಲರೂ ಆ ಚೈತನ್ಯದ ಪ್ರತಿರೂಪಗಳೇ ಹೌದು ಎಂಬ ಸತ್ಯವನ್ನು ಕಂಡುಕೊಳ್ಳಬೇಕಿದೆ. ಹೀಗಾಗಿ ಇಡಿಯ ಭೂಲೋಕವೇ ದೇವಲೋಕದ ಪ್ರತಿಫಲನವಲ್ಲದೆ ಬೇರಲ್ಲ ಎನ್ನುವುದನ್ನು ಪುರಾಣಪ್ರತೀಕಗಳು ಸಾರುತ್ತವೆ. ನಮ್ಮ ಸೃಷ್ಟಿಯೆಲ್ಲವೂ ಯಾವುದೋ ಒಂದು ಉದ್ದೇಶಕ್ಕಾಗಿಯೇ ಆಗಿರುವಂಥದ್ದು; ಆ ಉದ್ದೇಶವನ್ನು ಕಂಡುಕೊಂಡು ಅದನ್ನು ಪೂರೈಸುವುದೇ ನಮ್ಮ ಜೀವನದ ಪುರುಷಾರ್ಥ. ನಮ್ಮ ಮೂಲಬಿಂದು ದೈವತ್ವವೇ ಆಗಿರುವುದರಿಂದ, ನಮ್ಮೊಳಗಿನ ಆ ದೈವತ್ವದ ಸಾಕ್ಷಾತ್ಕಾರವೇ ನಮ್ಮ ಪುರುಷಾರ್ಥ ಎನ್ನುತ್ತದೆ, ಪರಂಪರೆ. ಹೀಗಾಗಿ ದೈವತ್ವ ಎಂದರೆ ಏನು – ಎಂಬ ಆತ್ಮಾನುಸಂಧಾನ ನಡೆಯದ ಹೊರತು ನಮ್ಮ ಜೀವನಸಾಫಲ್ಯ ಸಾಧ್ಯವಾಗದು. ನಮ್ಮಲ್ಲಿರುವ ದೈವತ್ವದ ಸಾಕ್ಷಾತ್ಕರವನ್ನು ನಾವೇ ಮಾಡಿಕೊಳ್ಳಬೇಕು. ಎಲ್ಲ ಕಲೆಗಳೂ ಅನುಕರಣವೇ ಹೌದು; ಆದರೆ ಅದು ಯಾವುದರ ಅನುಕರಣೆ ಎನ್ನುವುದು ನಮಗೆ ತಿಳಿಯಬೇಕು. ಅದರ ಮೂಲವೇ ತಿಳಿಯದ ಹೊರತು ಅನುಕರಣದ ಸಾಫಲ್ಯ ನಮಗೆ ಗೊತ್ತಾಗದು. ಎಂದರೆ ಇಡಿಯ ಸೃಷ್ಟಿಯ ಮೂಲ ಯಾವುದು ಎಂದು ನಮಗೆ ಗೊತ್ತಾಗಬೇಕು. ಆಗಷ್ಟೆ ಆ ಮೂಲದ ಪ್ರತಿಫಲನಗಳು ಮೂಲವನ್ನು ಅನುಕರಿಸುವುದರಲ್ಲಿ ಎಷ್ಟು ಯಶಸ್ವಿಯಾಗಿವೆ ಎನ್ನುವುದು ತಿಳಿಯುತ್ತದೆ. ಆನಂದ ಕುಮಾರಸ್ವಾಮಿ
ಯವರು ಕಲಾಮೀಮಾಂಸೆಯ ಬಗ್ಗೆ ಆಡಿರುವ ಮಾತುಗಳು ಸೃಷ್ಟಿಕಾರ್ಯಕ್ಕೂ ಅನ್ವಯವಾಗುವಂಥವೇ ಹೌದು. ಭಗವಂತನ ಕಲೆಯೇ ಈ ಸೃಷ್ಟಿ – ಎಂಬ ಒಕ್ಕಣೆಯೂ ಉಂಟಷ್ಟೆ!

ರಾಮನಷ್ಟೇ ಅಲ್ಲ, ವಾನರರೂ ಕೂಡ ದೈವಸಂಕಲ್ಪದ ಭಾಗವಾಗಿಯೇ ಸೃಷ್ಟಿಯಾದವರು ಎನ್ನುತ್ತಿದೆ, ರಾಮಾಯಣ.

* * *

ವಾನರರು ಮಾತ್ರವೇ ಅಲ್ಲ, ಕರಡಿಗಳೂ ಸಿಂಗಳೀಕಗಳೂ ವಿಷ್ಣುವಿಗೆ ಸಹಾಯಮಾಡಲು ಹುಟ್ಟಿದವು.

ಹೀಗೆ ಹುಟ್ಟಿದ ವಾನರರು ಋಕ್ಷವಂತ ಎಂಬ ಪರ್ವತಪ್ರದೇಶದಲ್ಲಿ ವಾಸವಾಗಿದ್ದರು. ಅವರೆಲ್ಲರೂ ವಾಲಿ ಮತ್ತು ಸುಗ್ರೀವರ ಒಡೆತನದಲ್ಲಿದ್ದರು.

ಈ ವಾನರರ ಶೌರ್ಯ ಎಂಥದು ಎನ್ನುವುದರ ಸೂಚನೆಯನ್ನೂ ಕವಿಮಹರ್ಷಿ ವಾಲ್ಮೀಕಿ ನೀಡಿದ್ದಾನೆ. ಅವರು ಬೆಟ್ಟಗಳಿಂದಲೇ ಯುದ್ಧಮಾಡಬಲ್ಲವರು. ಕೋರೆಯ ಹಲ್ಲು– ಉಗುರುಗಳೇ ಅವರ ಆಯುಧಗಳು. ಅವರು ಪರ್ವತಗಳನ್ನೇ ಅಲ್ಲಾಡಿಸಬಲ್ಲವರು. ವೇಗದಿಂದ ನುಗ್ಗಿ ಸಮುದ್ರವನ್ನೇ ಕ್ಷೋಭೆ
ಗೊಳಿಸಬಲ್ಲವರು. ಮಹಾಸಾಗರವನ್ನೇ ಈಜಬಲ್ಲವರು. ಮೋಡಗಳನ್ನೇ ಹಿಡಿದು ಎಳೆಯಬಲ್ಲರು. ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿಗಳನ್ನು ಅವರ ಗರ್ಜನೆಗಳಿಂದಲೇ ಕೆಳಕ್ಕೆ ಉದುರಿಸಬಲ್ಲರು. ಎಲ್ಲಕ್ಕಿಂತಲೂ ಮುಖ್ಯವಾಗಿ ಅವರೆಲ್ಲರೂ ಕಾಮರೂಪಿಗಳು; ಎಂದರೆ ಬೇಕಾದ ರೂಪವನ್ನೂ ಆಕಾರವನ್ನೂ ತಾಳಬಲ್ಲವರು.

* * *

ವಿಷ್ಣುವೂ ಸೇರಿದಂತೆ ಬೇರೆ ಬೇರೆ ದೇವತೆಗಳ ಅಂಶಗಳು ಭೂಲೋಕದಲ್ಲಿ ಹುಟ್ಟಬೇಕೆಂಬ ನಿರ್ಧಾರಕ್ಕೆ ಭಿತ್ತಿಯಾಗಿರುವುದೇ ಅಶ್ವಮೇಧಯಾಗ. ಈ ಯಾಗಕ್ಕೂ ಸೃಷ್ಟಿಶೀಲತೆಗೂ ನಂಟಿದೆ. ಅದನ್ನು ಮುಂದೆ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT