ತೆಲಸಂಗ: ‘ತೊಗರಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಸಹಕಾರಿ ಪತ್ತಿನ ಸಹಕಾರಿ ಬ್ಯಾಂಕ್ ಮೂಲಕ ತೊಗರಿ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ಹೆಸರು ನೋಂದಾಯಿಸಿದ ರೈತರು ನಿಗದಿತ ದಿನಾಂಕದಂದು ಕೇಂದ್ರಕ್ಕೆ ತೊಗರಿ ತರಬೇಕು’ ಎಂದು ಪಿಕೆಪಿಎಸ್ ಕಾರ್ಯದರ್ಶಿ ಮನೋಹರ ಬಡಿಗೇರ ಹೇಳಿದರು.
ಇಲ್ಲಿನ ಸಿದ್ಧರಾಮೇಶ್ವರ ಮಠದ ಆವರಣದಲ್ಲಿ ಶುಕ್ರವಾರ ಬೆಂಬಲ ಬೆಲೆ ಯೋಜನೆಯಡಿ ಪಿಕೆಪಿಎಸ್ ಮೂಲಕ ಎಫ್ಎಕ್ಯೂ ಗುಣಮಟ್ಟದ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಉತ್ತಮ (ಎಫ್ಎಕ್ಯೂ) ಗುಣಮಟ್ಟದ ತೊಗರಿಯನ್ನು ಕ್ವಿಂಟಲ್ಗೆ ₹ 6,100ರಂತೆ ಗರಿಷ್ಠ 10 ಕ್ವಿಂಟಲ್ ಖರೀದಿಸಲಾಗುವುದು. ಈಗಾಗಲೇ ಹೆಸರು ನೋಂದಾಯಿಸಿದ ರೈತರು ಸೂಕ್ತ ದಾಖಲಾತಿಯೊಂದಿಗೆ ಕೇಂದ್ರಕ್ಕೆ ಬರಬೇಕು. ಹಣವನ್ನು ಆರ್ಟಿಜಿಎಸ್ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಮಧ್ಯವರ್ತಿಗಳು, ವರ್ತಕರು, ತೊಗರಿಯನ್ನು ಮಾರಾಟಕ್ಕೆ ತಂದಿದ್ದು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ’ ಎಂದು ತಿಳಿಸಿದರು.
ಪಿಕೆಪಿಎಸ್ ಅಧ್ಯಕ್ಷ ಹಾಜಿಬಾ ಸಾವಂತ ಮಾತನಾಡಿ, ‘ರೈತರಿಗೆ ಅನಕೂಲವಾಗಲಿ ಎನ್ನುವ ಉದ್ದೇಶದಿಂದ ಇಲ್ಲಿಯ ಪಿಕೆಪಿಎಸ್ ಖರೀದಿಯ ಜವಾಬ್ದಾರಿ ಹೊತ್ತಿದೆ. ಸರದಿ ನಂಬರ್ ಆಧಾರದ ಮೇಲೆ ಖರೀಧಿಸುವ ವ್ಯವಸ್ಥೆ ಇದ್ದು, ರೈತರು ಸಹಕಾರ ನೀಡಬೇಕು. ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.