ಬೆಳಗಾವಿ: ‘ದೊಡ್ಡ ಹಿಡುವಳಿಗಳು ಈಗ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗೆ ಪರಿವರ್ತನೆಯಾಗಿದೆ. ಹೀಗಾಗಿ, ಆದಾಯ ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರಾರಂಭಿಸುವುದು ಇಂದಿನ ಅಗತ್ಯವಾಗಿದೆ’ ಎಂದು ಕೃಷಿ ವಿಶ್ವವಿದ್ಯಾಲಯ ಧಾರವಾಡದ ವಿಸ್ತರಣಾ ನಿರ್ದೇಶಕ ಡಾ.ರಮೇಶ ಬಾಬು ತಿಳಿಸಿದರು.
ಜಿಲ್ಲೆಯ ಕೃಷಿ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಹಾಗೂ ‘ಆತ್ಮ’ ಯೋಜನೆಯ ಸಿಬ್ಬಂದಿಗೆ ರೈತ ಉತ್ಪಾದಕ ಸಂಸ್ಥೆಗಳ ರಚನೆ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಆತ್ಮ’ ಯೋಜನೆ ನಿರ್ದೇಶಕ ಎಚ್.ಡಿ. ಕೋಳೇಕರ, ‘ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರು ಬೆಳೆದ ಉತ್ಪಾದನೆಗೆ ಒಳ್ಳೆಯ ಬೆಲೆ ಸಿಗಲು ರೈತ ಉತ್ಪಾದಕ ಸಂಸ್ಥೆಗಳಿಂದ ಸಹಾಯವಾಗಬಲ್ಲದು’ ಎಂದರು.
ಉಪ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಎನ್.ಡಿ. ನಾಯಕ, ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಗಿರಿಧರ ಜಾಧವ, ವಿವಿಧ ರೈತ ಉತ್ಪಾದಕರ ಕಂಪನಿಗಳ ಪ್ರತಿನಿಧಿಗಳಾದ ಮಹೇಶ ಬಾವಿಕಟ್ಟಿ, ಮಹಾದೇವ ಶಿದ್ನಾಳ, ಕೃಷಿ ವಿಶ್ವವಿದ್ಯಾಲಯದ ಡಾ.ಗೋಪಾಲ ಇದ್ದರು.
ಉಪ ಯೋಜನಾ ನಿರ್ದೇಶಕ ಆರ್.ಡಿ. ಕಟಗಲ್ಲ ಹಾಗೂ ಎಂ.ಸಿ. ಮಠದ ತರಬೇತಿ ನಡೆಸಿಕೊಟ್ಟರು.