ನಿಪ್ಪಾಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಕುರ್ಲಿ ಗ್ರಾಮದ ಹತ್ತಿರ ಮಂಗಳವಾರ ಬೈಕ್ ಅಪಘಾತಕ್ಕೀಡಾಗಿ ಒಬ್ಬ ಮಹಿಳೆ ಹಾಗೂ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯುವಕ ಹಾಗೂ ಬಾಲಕ ಗಾಯಗೊಂಡಿದ್ದಾರೆ. ನಾಲ್ವರೂ ಸಂಬಂಧಿಗಳಾಗಿದ್ದು, ಒಂದೇ ಬೈಕಿನಲ್ಲಿ ಸಂಚರಿಸುತ್ತಿದ್ದರು.
ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದ ಲಕ್ಷ್ಮೀ ಆನಂದ ಕೊಪ್ಪದ (25) ಹಾಗೂ ರಾಮದುರ್ಗ ತಾಲ್ಲೂಕಿನ ಕಟಕೋಳ ಗ್ರಾಮದ ಭಾಗ್ಯಶ್ರೀ ಸಾಗರ ವಕಮಿ (13) ಮೃತಪಟ್ಟವರು. ಹಣಮಂತ ಸಕ್ರಿ (23) ಮಾರುತಿ ರಮೇಶ ಚುನಾಮದಾರ (6) ಅವರಿಗೆ ಗಂಭೀರ ಗಾಯಗಳಾಗಿವೆ.
ಗಾಯಗೊಂಡವರನ್ನು ನಿಪ್ಪಾಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೇಗಾಯಿತು: ಕಟಕೋಳ ಮೂಲದವರಾದ ಇವರು ದುಡಿಮೆಗಾಗಿ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ವಲಸೆ ಹೋಗಿದ್ದರು. ದಸರಾ ಹಬ್ಬಕ್ಕಾಗಿ ಮಂಗಳವಾರ ತಮ್ಮ ಸ್ವಂತ ಊರಿಗೆ ಮರಳುತ್ತಿದ್ದರು.
ಒಂದೇ ಬೈಕಿನಲ್ಲಿ ಯುವಕ, ಮಹಿಳೆ, ಬಾಲಕ ಹಾಗೂ ಬಾಲಕಿ ಊರಿನತ್ತ ಪ್ರಯಾಣ ಬೆಳೆಸಿದ್ದರು.
ಕುರ್ಲಿ ಗ್ರಾಮದ ಬಳಿ ಬೈಕ್ ಟೈರ್ ಸಿಡಿದು ಆಯತಪ್ಪಿ ಬಿದ್ದರು. ಮಹಿಳೆ ಹಾಗೂ ಬಾಲಕಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.