ಗೋಕಾಕ: ‘ಶಾಸಕ ಉಮೇಶ ಕತ್ತಿ ಕಳೆದ 25 ವರ್ಷಗಳಿಂದಲೂ ನನ್ನ ಸ್ನೇಹಿತರು. ಅವರೊಂದಿಗೆ ಪ್ರತಿದಿನ ಮಾತನಾಡುತ್ತೇನೆ. ಅವರೇನು ಪಾಕಿಸ್ತಾನದವರಲ್ಲ. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಯಾರಿಗೂ ಅಸಮಾಧಾನವಿಲ್ಲ’ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರ ಸುಭದ್ರವಾಗಿದೆ. ತನ್ನ ಪೂರ್ಣಾವಧಿ ಪೂರ್ಣಗೊಳಿಸಲಿದೆ. ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ತೀರ್ಪು ಬಂದ ನಂತರ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ನುಡಿದರು.
‘ಉಮೇಶ ಕತ್ತಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿರಬಹುದು. ಅದರಲ್ಲಿ ತಪ್ಪೇನೂ ಇಲ್ಲ. ಬೇರೆ ಪಕ್ಷದಲ್ಲಿ ನಮ್ಮ ಸ್ನೇಹಿತರು ಸಾಕಷ್ಟಿದ್ದಾರೆ. ನಾವು ಪ್ರತಿದಿನ ಮಾತನಾಡುತ್ತೇವೆ. ಅದು ತಪ್ಪೇ’ ಎಂದು ಮರುಪ್ರಶ್ನಿಸಿದರು.