ಬೆಳಗಾವಿ: ‘ಮುಂಗಾರು ಮಳೆಯ ವಿಫಲತೆಯಿಂದಾಗಿ ಆಲಮಟ್ಟಿ, ಮಲಪ್ರಭಾ, ಹಿಪ್ಪರಗಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕಡಿಮೆಯಾಗಿದೆ. ಸದ್ಯ ಇರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಬೇಕು’ ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಗುರುವಾರ ನಡೆದ ಆಲಮಟ್ಟಿ ಜಲಾಶಯ, ಮಲಪ್ರಭಾ ಯೋಜನೆ, ಘಟಪ್ರಭಾ ಯೋಜನೆ ಮತ್ತು ಹಿಪ್ಪರಗಿ ಯೋಜನೆ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಪ್ರಸ್ತುತ ಬೆಳಗಾವಿ ಜಿಲ್ಲೆಯ ಹಿರಣ್ಯಕೇಶಿ ನದಿಗೆ ಅಲ್ಪ ಪ್ರಮಾಣದ ನೀರಿನ ಒಳ ಹರಿವು ಪ್ರಾರಂಭವಾಗಿದೆ. ಘಟಪ್ರಭಾ ನದಿಯ ಧೂಪದಾಳ ವೇಯರ್ ನೀರಿನ ಮಟ್ಟ ಜುಲೈ 7ಕ್ಕೆ 2008.5 ಅಡಿ ತಲುಪುವ ಸಾಧ್ಯತೆ ಇದೆ. ಆದರೆ, ಘಟಪ್ರಭಾ ನದಿಯ ಕೆಳಗಡೆ ಇರುವ 14 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಈಗಾಗಲೇ ಬೆಳಗಾವಿ ಜಿಲ್ಲೆಯ ಹುಲಕುಂದ, ಬಾಗಲಕೋಟೆ ಜಿಲ್ಲೆಯ ಸೈದಾಪೂರ, ಅರಕೆರೆ, ಚಿಂಚಲಕಟ್ಟಿ ಅನವಾಲ ಮತ್ತು ಕಟಗೇರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿವೆ’ ಎಂದು ತಿಳಿಸಿದರು.
‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅವಲಂಬಿತ ಗ್ರಾಮಗಳಿಗೆ ನೀರಿನ ಅಭಾವ ತಪ್ಪಿಸಲು, ಧೂಪದಾಳ ವೇಯರ್ನಿಂದ ಹೆಚ್ಚುವರಿ ನೀರನ್ನು ಘಟಪ್ರಭಾ ನದಿಗೆ ಹರಿಬಿಡಬೇಕು’ ಎಂದೂ ಸೂಚಿಸಿದರು.
‘ನೀರಾವರಿ ಉದ್ದೇಶಕ್ಕಾಗಿ ಜಲಾಶಯಗಳ ನೀರು ಬಳಸಲು ನೀರಾವರಿ ಸಲಹಾ ಸಮಿತಿಯಿಂದ ಅಥವಾ ಸರ್ಕಾರದಿಂದ ಅನುಮತಿ ಪಡೆದು ಕ್ರಮ ಕೈಗೊಳ್ಳಬಹುದು’ ಎಂದರು.
ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಹಾಗೂ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹ ಕುರಿತು ಪ್ರಾದೇಶಿಕ ಆಯುಕ್ತರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಆಲಮಟ್ಟಿ ಜಲಾಶಯ, ಮಲಪ್ರಬಾ ಯೋಜನೆ, ಘಟಪ್ರಬಾ ಯೋಜನೆ ಹಾಗೂ ಹಿಪ್ಪರಗಿ ಯೋಜನೆಯ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಸಂಬಂಧಿಸಿದ ಸೂಪರಿಂಟೆಂಡಿಂಗ್ ಎಂಜಿಯರ್, ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.
Cut-off box - ಪಟ್ಟಿ ಬೆಳಗಾವಿ ವಿಭಾಗದ ಮಳೆ ಪ್ರಮಾಣ ಜಿಲ್ಲೆ;ವಾಡಿಕೆ(ಮಿ.ಮೀ);ವಾಸ್ತವ(ಮಿ.ಮೀ);ಕೊರತೆ (ಶೇಕಡ) ಬೆಳಗಾವಿ;175;71;60 ಬಾಗಲಕೋಟೆ:94;31;67 ವಿಜಯಪುರ;98;47;52 ಗದಗ;95;65;32 ಹಾವೇರಿ;146;75;49 ಧಾರವಾಡ;147;71;51 ಉತ್ತರ ಕನ್ನಡ;859;506;41
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.