ಭಗವಂತನು ಸೃಷ್ಟಿಸಿರುವ ಈ ಪ್ರಪಂಚದಲ್ಲಿ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ ಪ್ರಾಣಿಯೊಂದೆ. ಸಕಲವನ್ನು, ಸರ್ವಸ್ವವನ್ನೂ ಅರಿಯುವ ವಿಶಿಷ್ಟ ವಿವೇಚನಾ ಶಕ್ತಿಯನ್ನು ಆತ ಪಡೆದಿದ್ದಾನೆ. ಅಂತಹ ಬುದ್ಧಿವಂತನಾದ ಮಾನವನು ಸುಖ-ದುಃಖಗಳನ್ನು ಅನುಭವಿಸುತ್ತಾನೆ. ಕಷ್ಟ-ನಷ್ಟಗಳನ್ನು ಕಾಣುತ್ತಾನೆ. ಅನುಭವಿಸುತ್ತಾನೆ. ನೋವು-ನಲಿವುಗಳನ್ನು ಅನುಭವಿಸುತ್ತಾನೆ. ಭಗವಂತನ ಅನುಗ್ರಹವನ್ನು ಪಡೆಯುವ ಶಕ್ತಿ ಮಾನವನಿಗೆ ಮಾತ್ರ ಇದೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಆತ ನಡೆದುಕೊಳ್ಳುವುದರಿಂದ ಭವಸಾಗರದ ಬಲೆಯಲ್ಲಿ ಬಿದ್ದು ನರಳಾಡುತ್ತಾನೆ. ಈ ಲೋಕದಲ್ಲಿ ದುಃಖಿಯನ್ನಾಗಿ ಹುಟ್ಟಿಸುವ ಬದಲು ಗಿಡಮರಾದಿ (ತರುಮರಾದಿ)ಗಳನ್ನಾಗಿ ಹುಟ್ಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬಸವಣ್ಣನವರು ಈ ವಚನದ ಮೂಲಕ ಭಗವಂತನಲ್ಲಿ ಮೊರೆ ಇಟ್ಟಿದ್ದಾರೆ.