ಮಾನವನು ತನ್ನಲ್ಲಿರುವ ಅಜ್ಞಾನದಿಂದ ಭಗವಂತನ ನಾಮಸ್ಮರಣೆಯನ್ನು ಮರೆಯುತ್ತಾನೆ. ಸಂಸಾರದ ಜಂಜಡದಲ್ಲಿ ಮುಳುಗಿರುವ ಆತನು ಭಗವಂತನ ಕುರಿತು ಚಿಂತಿಸದೆ, ತನ್ನದೆಯಾದ ಸಂಸಾರದ ಬಲೆಯಲ್ಲಿ ಬಿದ್ದಿರುವನು. ಅದಕ್ಕೆ ಬಸವಣ್ಣ ಅವರು ಮನಸ್ಸು ಸದಾಕಾಲ ಭಗವಂತನ ಸ್ಮರಣೆಯಲ್ಲಿರಬೇಕು ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಆನೆಯು ಎಲ್ಲ ಪ್ರಾಣಿಗಳಲ್ಲಿಯೆ ದೊಡ್ಡದಾದುದು ಅದು ಚಿಕ್ಕದಾದ ಅಂಕುಶಕ್ಕೆ ಮಾತ್ರ ಬಾಗುತ್ತದೆ. ಗುಡ್ಡ, ಬೆಟ್ಟಗಳು ದೊಡ್ಡವಾದರೂ ಅವುಗಳನ್ನು ಕತ್ತರಿಸುವ ಸಾಧನ ಮಾತ್ರ ಚಿಕ್ಕದಾದ ವಜ್ರ. ಕತ್ತಲೆಯೂ ಅಗಾಧವಾದರೂ ಅದನ್ನು ಕಿರಿದಾದ ಜ್ಯೋತಿಯಿಂದ ಹೋಗಲಾಡಿಸುವಂತೆ, ಮಾನವನ ಮರೆವಿನ ಸ್ವಭಾವ ಎಷ್ಟೇ ದೀರ್ಘವಾದರೂ ಭಗವಂತನ ನೆನೆಯುವ ಮನಸ್ಸು ಕೂಡ ಚಿಕ್ಕದಲ್ಲ ಎನ್ನುವುದನ್ನು ಈ ವಚನದ ಮೂಲಕ ತಿಳಿಸಿದ್ದಾರೆ.