ಬೆಳಗಾವಿ: ‘ಕೊರೊನಾ ಸೋಂಕಿನ ಜಾಗೃತಿ ಕಾರ್ಯದಲ್ಲಿ ತೊಡಗಿರುವ ತಮಗೂ ₹ 5ಸಾವಿರ ಪ್ರೋತ್ಸಾಹಧನ ನೀಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಗ್ರಾಮೀಣ ನೌಕರರಿಗೆ ಈ ತಿಂಗಳ ಗೌರವಧನವನ್ನು ಕೂಡಲೇ ನೀಡಬೇಕು. ಮೇಲ್ವಿಚಾರಕಿಯರು ಪ್ರತಿ ತಿಂಗಳು ಹಿಂಬಾಕಿ ಹಣದಲ್ಲಿ ₹ 1000ದಿಂದ ₹ 3ಸಾವಿರ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬಹಳ ಅನ್ಯಾಯವಾಗುತ್ತಿದ್ದು, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
‘ಗೌರವಧನ, ಕೇಂದ್ರಗಳ ಬಾಡಿಗೆ ಹಣ ಹಾಗೂ ಅಡುಗೆ ಅನಿಲ ಸಿಲಿಂಡರ್ ಖರೀದಿ ಅನುದಾನವನ್ನು ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ಕೊಡಬೇಕು. ಕಾರ್ಯಕರ್ತೆಯರಿಗೆ ಗೋವಾ ಮಾದರಿಯಲ್ಲಿ ₹ 18ಸಾವಿರ ಗೌರವಧನ ನೀಡಬೇಕು’ ಎಂದು ಆಗ್ರಹಿಸಿದರು.
ಅಧ್ಯಕ್ಷ ನಾಗೇಶ ಎಂ. ಸಾತೇರಿ, ಉಪಾಧ್ಯಕ್ಷರಾದ ಯಲ್ಲೂಭಾಯಿ ಶೀಗಿಹಳ್ಳಿ, ಮೀನಾಕ್ಷಿ ಕೋಟಗಿ ನೇತೃತ್ವ ವಹಿಸಿದ್ದರು.