ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ಶುಕ್ರವಾರ ‘ವಟ ಸಾವಿತ್ರಿ ವ್ರತ’ವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.
ಪತಿ ಸತ್ಯವಾನ್ನನ್ನು ಉಳಿಸಿಕೊಳ್ಳಲು ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಹುಣ್ಣಿಮೆಯಂದು ವಟ ಸಾವಿತ್ರಿ ವ್ರತವನ್ನು ಮುತ್ತೈದೆಯರು ಆಚರಿಸುವ ಸಂಪ್ರದಾಯ ಈ ಭಾಗದಲ್ಲಿದೆ.
ತಮ್ಮ ಮನೆಗಳ ಸಮೀಪದಲ್ಲಿರುವ ದೇವಸ್ಥಾನಗಳ ಆವರಣದಲ್ಲಿರುವ ಆಲದ ಮರಕ್ಕೆ ಅವರು ಪೂಜೆ ಸಲ್ಲಿಸಿದರು. ಪತಿಗೆ ಆರೋಗ್ಯ ಮತ್ತು ಆಯುಷ್ಯವನ್ನು ಪ್ರಾರ್ಥಿಸಿದರು. ಕೊರೊನಾ ಸೋಂಕಿನ ಭೀತಿಯಿಂದಾಗಿ ದೇವಸ್ಥಾನಗಳಲ್ಲಿ ಪೂಜೆಗೆ ಅವಕಾಶವಿರಲಿಲ್ಲ. ಹೀಗಾಗಿ, ಆಲದ ಮರದ ಆವರಣದಲ್ಲೇ ಪೂಜಿ ಸಲ್ಲಿಸುತ್ತಿದ್ದುದು ಕಂಡುಬಂತು. ಮರಕ್ಕೆ ನೂಲು ಸುತ್ತುವಾಗ ಅವರು ಅಂತರ ಮರೆತರು. ಬಹುತೇಕರು ಮುಖಗವಸು ಧರಿಸಿರಲಿಲ್ಲ.
ಶಾಹೂನಗರದ ಶಿವಾಲಯ, ಕಪಿಲೇಶ್ವರ ಮಂದಿರ ಆವರಣ, ರಾಣಿ ಚನ್ನಮ್ಮ ವೃತ್ತದ ಗಣೇಶ ಮಂದಿರ ಮೊದಲಾದ ಕಡೆಗಳಲ್ಲಿ ಮಹಿಳೆಯರು ಆಲದ ಮರಕ್ಕೆ ಭಕ್ತಿಭಾವದಿಂದ ನೂಲನ್ನು ಸುತ್ತುತ್ತಾ ಪ್ರದಕ್ಷಿಣೆ ಹಾಕುವ ಮೂಲಕ ಪೂಜೆ ಸಲ್ಲಿಸಿದರು. ಕೊರೊನಾ ಭೀತಿಯಿಂದಾಗಿ ಈ ಬಾರಿ ಮಹಿಳೆಯರು ಸಂಖ್ಯೆ ಕಡಿಮೆ ಇತ್ತು.
ಮೋಳೆ ವರದಿ: ಇಲ್ಲಿ ಮುತ್ತೈದೆಯರು ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲೆಂದು ಪ್ರಾರ್ಥಿಸಿ ವಟ ಸಾವಿತ್ರಿ ವ್ರತ ಆಚರಿಸಿದರು.
ಕಾಗವಾಡ ತಾಲ್ಲೂಕಿನ ಉಗಾರದಲ್ಲಿ ದೊಡ್ಡ ಆಲದ ಮರದ ಬದಲಿಗೆ ಚಿಕ್ಕ ಆಲದ ಸಸಿ ಪೂಜಿಸಿದರು. ಪಾಟ್ನಲ್ಲಿದ್ದ ಸಸಿಗೆ ಅಂತರ ಕಾಯ್ದುಕೊಳ್ಳುವ ಮೂಲಕ ನೂಲು ಸುತ್ತಿ ನಮಿಸಿದರು.