ಬೆಳಗಾವಿ: ‘ಹಿಂದೂಗಳು ಶಸ್ತ್ರಗಳನ್ನು ಪೂಜೆ ಮಾಡುವುದು ಮಾತ್ರವಲ್ಲ; ಬಳಸುವುದಕ್ಕೂ ಕಲಿಯಬೇಕು. ಸೈನಿಕರು, ಪೊಲೀಸರಿಂದ ಮಾತ್ರ ಹಿಂದೂ ಧರ್ಮ ಹಾಗೂ ಹಿಂದೂಗಳ ರಕ್ಷಣೆ ಸಾಧ್ಯವಿಲ್ಲ. ಪರಾಕ್ರಮದಿಂದ ನಮ್ಮ ರಕ್ಷಣೆಗೆ ನಾವೇ ಸನ್ನದ್ಧಗೊಳ್ಳಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಸಹ ಕಾರ್ಯದರ್ಶಿ,ಅಯೋಧ್ಯೆಯ ರಾಮ ಮಂದಿರ ನವನಿರ್ಮಾಣದ ಉಸ್ತುವಾರಿಯಲ್ಲಿ ಒಬ್ಬರಾದ ಗೋಪಾಲ್ ನಾಗರಕಟ್ಟೆ ಹೇಳಿದರು.
ಇಲ್ಲಿನ ಶಾಸ್ತ್ರಿ ನಗರದಲ್ಲಿರುವ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಬುಧವಾರ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
‘ಚಾಕು, ಕತ್ತರಿಯಂಥ ಚಿಕ್ಕ ಮನೆಬಳಕೆ ವಸ್ತುಗಳನ್ನು ಪೂಜಿಸುವುದಲ್ಲ. ಹೋರಾಟಕ್ಕೆ, ಹೊಡೆದಾಟಕ್ಕೆ ಬಳಸುವಂಥ ಅಸ್ತ್ರಗಳನ್ನು ಪೂಜಿಸಿ. ಅಸ್ತ್ರಗಳನ್ನು ರಾವಣ, ಸದ್ದಾಂ ಹುಸೇನ್ನಂಥವರೂ ಬಳಸಿದ್ದಾರೆ. ನೀವು ಅವರಂತೆ ಆಗದೇ ಶ್ರೀರಾಮ, ಶಿವಾಜಿಯಂತೆ ನ್ಯಾಯಕ್ಕಾಗಿ ಬಳಸಬೇಕು’ ಎಂದು ಹೇಳಿದರು.
‘ಈ ಹಿಂದೆ ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಈಗ ಪ್ರತ್ಯುತ್ತರ ನೀಡುವ ಕೆಲಸಗಳೂ ನಡೆಯುತ್ತಿವೆ. ಹಿಂದೂಗಳಲ್ಲಿ ಪರಾಕ್ರಮ ಜಾಗೃತವಾಗುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆ’ ಎಂದರು.
‘ಈ ಮುಂಚೆಯೇ ನಾವು ಪರಾಕ್ರಮ ತೋರಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು. ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆಗಳು ನಡೆದಾಗ ಬಜರಂಗ ದಳದ ಯುವಕರು ಸುಮ್ಮನಾಗಿದ್ದು ದುರ್ದೈವ. ಬಿಸಿರಕ್ತ ಇದ್ದವರು ನೂಪುರ್ ಶರ್ಮಾ ಅವರೊಂದಿಗೆ ನಿಂತು ಧ್ವನಿ ಎತ್ತಬೇಕಿತ್ತು. ಹಿಂದೂ ಕಾರ್ಯಕರ್ತರು ಪೊಲೀಸ್ ಪ್ರಕರಣಗಳಿಗೆ ಹೆದರಬಾರದು’ ಎಂದು ಹೇಳಿದರು.