ಅಥಣಿ (ಬೆಳಗಾವಿ ಜಿಲ್ಲೆ): ‘ಬಸವಾದಿ ಶರಣರ ತತ್ವಗಳನ್ನು ಆಚರಿಸಿ ತೋರಿಸಿದ ಅಥಣಿ ಶಿವಯೋಗಿಗಳು ಆಧ್ಯಾತ್ಮ ಕ್ಷೇತ್ರದ ಮೇರು ಪರ್ವತ’ ಎಂದು ನದಿ ಇಂಗಳಗಾವಿಯ ಅಭಿನವ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿ ಮುರುಘೇಂದ್ರ ಶಿವಯೋಗಿಗಳ ಜಯಂತ್ಯುತ್ಸವ ಅಂಗವಾಗಿ ಗಚ್ಚಿನಮಠದ ಗುರುಭವನಕ್ಕೆ ಭೂಮಿಪೂಜೆಯನ್ನು ಶನಿವಾರ ನೆರವೇರಿಸಿ ಅವರು ಮಾತನಾಡಿದರು.
‘ಶಿವಯೋಗಿಯಾದರೆ ಅಥಣಿ ಶಿವಯೋಗಿಯಂತೆ ಆಗಬೇಕು ಎಂಬ ಮಾತು ಪ್ರಚಲಿತಕಕ್ಕೆ ಬಂದಿದೆ. ಅಂತಹ ಶ್ರೇಷ್ಠ ಬದುಕನ್ನು ಬಾಳಿದವರು ಮುರುಘೇಂದ್ರ ಶಿವಯೋಗಿ. ನಡೆ–ನುಡಿ ಒಂದಾದ ಬದುಕು ಅವರದಾಗಿತ್ತು. ಎಂದೂ ಯಾರಿಗೂ ಮಾತಿನಲ್ಲಿ ಬೋಧನೆ ಮಾಡಲಿಲ್ಲ. ತಮ್ಮ ನಿಜಾಚರಣೆಯ ಬದುಕಿನಿಂದ ಬೋಧಿಸಿದರು. ಅಂತಹ ಮಹಾತ್ಮರನ್ನು ಸ್ಮರಿಸಿ ಅವರ ಆದರ್ಶ ಪಾಲಿಸಿ ಸನ್ಮಾರ್ಗದಲ್ಲಿ ನಡೆಯೋಣ’ ಎಂದು ಆಶಿಸಿದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ, ‘ಗುರುಭವನ ನಿರ್ಮಾಣ ಕಾಮಗಾರಿಯನ್ನು ಆದಷ್ಟು ತ್ವರಿತವಾಗಿ ಮುಗಿಸಲಾಗುವುದು. ಮುಂದೆ ₹ 1 ಕೋಟಿ ವೆಚ್ಚದಲ್ಲಿ ಮಹಾದ್ವಾರ ನಿರ್ಮಾಣವನ್ನು ಎಲ್ಲ ದಾನಿಗಳ ಸಹಕಾರದಿಂದ ಮಾಡಲಾಗುವುದು. ದಾನಿಗಳಿಂದ ಬಂದ ಹಣವನ್ನು ಖಾತೆಯಲ್ಲಿಟ್ಟು ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ. ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವವನ್ನೂ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ತಿಳಿಸಿದರು.
ಪಲ್ಲಕ್ಕಿ ಉತ್ಸವ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನೂ ಕೋವಿಡ್ ಕಾರಣದಿಂದ ಸರಳವಾಗಿ ನಡೆಸಲಾಯಿತು.
ತೆಲಸಂಗದ ವೀರೇಶ್ವರ ದೇವರು, ಕೊಪ್ಪಳದ ಸಿದ್ದಲಿಂಗ ದೇವರು, ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ಮುಖಂಡರಾದ ಪ್ರಕಾಶ ಕುಮಠಳ್ಳಿ, ಧರೆಪ್ಪ ಠಕ್ಕಣ್ಣವರ, ಸದಾಶಿವ ಬುಟಾಳಿ, ರಾಜು ಆಲಬಾಳ, ಸಂತೋಷ ಸಾವಡಕರ, ಶಿವು ಸಂಕ, ಶಿವಾನಂದ ದಿವಾನಮಳ, ವಿವೇಕ ಮೆಣಶಿ ಇದ್ದರು.