ಬೆಳಗಾವಿ: ನೇಕಾರರ ಪ್ರಚಲಿತ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ನೇಕಾರ ಸಂಘಟನೆಗಳ ಒಕ್ಕೂಟದಿಂದ ನಗರದ ವಡಗಾವಿಯಲ್ಲಿ ನೇಕಾರರು ಮಂಗಳವಾರ ಸಾಂಕೇತಿಕ ಸಭೆ ನಡೆಸಿದರು.
ಅಧ್ಯಕ್ಷ ಗಜಾನನ ಗುಂಜೇರಿ ಮಾತನಾಡಿ, ‘ಎರಡು ವರ್ಷಗಳಿಂದ ನೆರೆ ಹಾವಳಿ ಮತ್ತು ಹೋದ ವರ್ಷ ಕೋವಿಡ್ ಲಾಕ್ಡೌನ್ನಿಂದ ಎರಡು ಸಂಕಷ್ಟಕ್ಕೆ ಒಳಗಾಗಿದ್ದೆವು. ಈ ವರ್ಷ ಮತ್ತೆ ಕೋವಿಡ್ ಕಾರಣದಿಂದ ನೇಕಾರರು, ಮಗ್ಗಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಮಗ್ಗಗಳು ಸ್ತಬ್ಧವಾಗಿವೆ. ನೂರಾರು ಕುಟುಂಬಗಳು ಕಂಗೆಟ್ಟಿವೆ’ ಎಂದು ತಿಳಿಸಿದರು.
‘ನೇಕಾರರ ಬದುಕು ಗಂಭೀರವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಬಹಳಷ್ಟು ಮಂದಿ ಉಪ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಎರಡು ವರ್ಷಗಳಲ್ಲಿ 21 ಜನ ಬಡ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕ ಅಭಯ ಪಾಟೀಲ ಅವರ ಪ್ರಯತ್ನದಿಂದಾಗಿ ಬೆಳಗಾವಿಯಲ್ಲಿ ಇಬ್ಬರಿಗೆ ₹ 2 ಲಕ್ಷ ಪರಿಹಾರ ಸಿಕ್ಕಿದೆ. 19 ಮಂದಿಗೆ ಸರ್ಕಾರದ ಸಹಾಯ ಸಿಗದಿರುವುದು ವಿಪರ್ಯಾಸ’ ಎಂದು ದೂರಿದರು.
‘ನೇಕಾರರು ಹೆಚ್ಚಿರುವ ಮತ ಕ್ಷೇತ್ರದ ಜನಪ್ರತಿನಿಧಿಗಳು ನಮ್ಮ ಪರ ಧ್ವನಿ ಎತ್ತಬೇಕು’ ಎಂದು ಒತ್ತಾಯಿಸಿದರು.
‘ಪ್ರತಿ ನೇಕಾರರಿಗೆ ₹ 5 ಸಾವಿರ ವಿತರಣೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ವೃತ್ತಿಪರ ನೇಕಾರರನ್ನು ಅಸಂಘಟಿತ ವಲಯದಲ್ಲಿ ಸೇರಿಸಿ, ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳನ್ನು ಕಲ್ಪಿಸಬೇಕು. ಬೇಡಿಕೆ ಇಲ್ಲದೆ ಲಕ್ಷಾಂತರ ಸೀರೆಗಳು ಮನೆಯಲ್ಲಿ ಉಳಿದಿದ್ದು, ಸರ್ಕಾರ ವಿಶೇಷ ಯೋಜನೆ ರೂಪಿಸಿ ನೇರವಾಗಿ ಖರೀದಿಸಬೇಕು. ವಿದ್ಯುತ್ ಬಿಲ್ ಕಟ್ಟಲು ಎರಡು ತಿಂಗಳು ಅವಧಿ ವಿಸ್ತರಿಸಬೇಕು’ ಎಂದು ಸಭೆ ಆಗ್ರಹಿಸಿತು.