ಬೆಳಗಾವಿ: ಮಹಿಳೆ ಈಗ ಎಲ್ಲ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾಳೆ. ಆಕೆಗೆ ಉದ್ಯೋಗದಲ್ಲಿ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಶೇ 33ರಿಂದ ಶೇ 50ಕ್ಕೆ ಹೆಚ್ಚಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.
ಜಿಲ್ಲಾ ಲೇಖಕಿಯರ ಸಂಘದಿಂದ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಲ್ಲಿನ ವೀರಸೌಧ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಸಂತ ವನವಿಹಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಪಾಲು, ಸಹಬಾಳ್ವೆ ತತ್ವದ ಬೆನ್ನು ಹತ್ತಿ ಸಾಮಾಜಿಕ, ಸಾಹಿತ್ಯ ಮೊದಲಾದ ಎಲ್ಲ ರಂಗಗಳಲ್ಲೂ ಮುನ್ನುಗ್ಗುವುದು ಮಹಿಳೆಯರ ಗುರಿಯಾಗಬೇಕು’ ಎಂದರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಮಾತನಾಡಿ, ‘ವರ್ಷ ಪೂರ್ತಿ ಹಲವು ಲೇಖಕಿಯರು ಉನ್ನತ ಮಟ್ಟದ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ. ಅದರ ಗೌರವರ್ಥವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘದ ಸದಸ್ಯರು ಇನ್ನೂ ಹೆಚ್ಚು ವಾಸ್ತವಕ್ಕೆ ತರೆದುಕೊಳ್ಳುವ ನಿಟ್ಟಿನಲ್ಲಿ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು’ ಎಂದು ಸಲಹೆ ನೀಡಿದರು.