ಬೆಳಗಾವಿ: ‘ಪ್ರಪಂಚದ ಎಲ್ಲ ದೇಶಗಳು ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತಿದ್ದರೂ ಮಹಿಳೆಯರಿಗೆ ಸರಿಯಾದ ಹಕ್ಕು ಸಿಗುತ್ತಿಲ್ಲ. ಸ್ತ್ರೀ ಸ್ವಾತಂತ್ರ್ಯ–ಸಬಲೀಕರಣಕ್ಕಾಗಿ ನಮ್ಮ ದೇಶದಲ್ಲಿಯೂ ಈಗಲೂ ಹೋರಾಟ ನಡೆಸುವ ಪರಿಸ್ಥಿತಿ ಇರುವುದು ಸಮಾಜದ ಸಂವೇದನೆಗೆ ಕನ್ನಡಿ ಹಿಡಿದಿದೆ’ ಎಂದು ಸಂಸದೆ ಮಂಗಲಾ ಅಂಗಡಿ ಕಳವಳ ವ್ಯಕ್ತಪಡಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಬೆಳಗಾವಿ ಮಹಿಳಾ ಘಟಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ತ್ರೀ ಸಬಲೀಕರಣ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಿದೆ’ ಎಂದು ಆಶಿಸಿದರು.
ಮುಖ್ಯಅತಿಥಿಯಾಗಿದ್ದ ನಗರಪಾಲಿಕೆ ಸದಸ್ಯ ಮಂಗೇಶ ಪವಾರ, ‘ಮಹಿಳೆ ಸಮಾಜದ ಶಕ್ತಿ ಮತ್ತು ಕುಟುಂಬದ ಕಣ್ಣು. ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ’ ಎಂದರು.
ಡಿಎಚ್ಒ ಡಾ.ಶಶಿಕಾಂತ ಮುನ್ಯಾಳ, ‘ಇಲಾಖೆಯ ಕಾರ್ಯಕರ್ತೆಯರು ಕೋವಿಡ್ ಸಂದರ್ಭದಲ್ಲಿ ಮಾಡಿದ ಕಾರ್ಯ ಶ್ಲಾಘನೀಯವಾದುದು’ ಎಂದು ಹೇಳಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಬೆಳಗಾವಿ ಮಹಿಳಾ ಘಟಕದ ಸಂಚಾಲಕಿ ಪ್ರಿಯಾ ಪುರಾಣಿಕ, ‘ನಾರಿ ಹತ್ತು ಪುರುಷರಿಗೆ ಸಮಾನ. ತನ್ನ, ಶಕ್ತಿ, ಯುಕ್ತಿ, ಛಲದಿಂದ ಮಹಿಳೆ ಈಗ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾಳೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಅಧ್ಯಕ್ಷ ಅಶೋಕ ಬಾದಾಮಿ ಮಾತನಾಡಿ, ‘ಎಲ್ಲ ಮಹಿಳೆಯರಿಗೂ ಅವರವರ ಹಕ್ಕುಗಳು ದೊರೆಯುವಂತಾಗಬೇಕು ಮತ್ತು ಶೋಷಣೆ ನಿಲ್ಲಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಸಂಸದೆ ಮಂಗಲಾ ಅಂಗಡಿ ಹಾಗೂ ಸರಿತಾ ಸಾಣಿಕೊಪ್ಪ ಅವರನ್ನು ಸಾಧಕಿಯರು ಎಂದು ಗುರುತಿಸಿ ರೆಡ್ಕ್ರಾಸ್ ವತಿಯಿಂದ ಸತ್ಕರಿಸಲಾಯಿತು. ಕಾಯಕಲ್ಪ ಕಾರ್ಯಕ್ರಮದಲ್ಲಿ ‘ಎನ್ಕ್ಯೂಎಎಸ್’ ಪ್ರಮಾಣೀಕರಣಕ್ಕೆ ಆಯ್ಕೆಯಾದ ರಾಮನಗರದ ನ.ಪ್ರಾ.ಆ. ಕೇಂದ್ರದ ವ್ಶೆದ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ಟಿಎಚ್ಒ ಕಚೇರಿಯಿಂದ ಸತ್ಕರಿಸಲಾಯಿತು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಅನಿಲ ಕೊರಬು, ರೆಡ್ಕ್ರಾಸ್ ಸಂಸ್ಥೆ ಸಿಬ್ಬಂದಿ, ಟಿಎಚ್ಒ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕವಿತಾ ಬಡಿಗೇರ ಪ್ರಾರ್ಥಿಸಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ.ಡಿ.ಎನ್. ಮಿಸಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಜಿ. ಅಗ್ನಿಹೋತ್ರಿ ನಿರೂಪಿಸಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಖಜಾಂಚಿ ನಿವೃತ್ತ ಕರ್ನಲ್ ವಿನೋದಿನಿ ಶರ್ಮಾ ವಂದಿಸಿದರು.
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಬೆಳಗಾವಿ: ‘ಮಹಿಳೆಯರು ತಮ್ಮ ಕುಟುಂಬದ ಆರೈಕೆ ಜೊತೆಗೆ ಸ್ವಯಂ ಕಾಳಜಿ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಹಂಜಿ ಕಾನ್ಸರ್ ಆಸ್ಪತ್ರೆಯ ನಿರ್ದೇಶಕ ಡಾ.ಅಭಿನಂದನ ಹಂಜಿ ಸಲಹೆ ನೀಡಿದರು.
ನಗರದ ಕೆಎಲ್ಎಸ್ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯ ಡಾ.ಎಚ್.ಎಚ್. ವೀರಾಪುರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಡಾ.ಶಶಿಕಲಾ ಜವಳಕರ ಇದ್ದರು.
ಜ್ಯೋತಿ ಹಿರೇಮಠ ಸ್ವಾಗತಿಸಿದರು. ಪ್ರೊ.ನಯನಾ ರಾಯಚೂರ ನಿರೂಪಿಸಿದರು. ಪ್ರೊ.ಸೆಜಲ ಬಾಗಿ ವಂದಿಸಿದರು.
ಶೇಖ್ ಕಾಲೇಜಿನಲ್ಲಿ
ಬೆಳಗಾವಿ: ನಗರದ ಎ.ಎಂ. ಶೇಖ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸ್ನಾತಕೋತ್ತರ ಪದವಿ ಸಂಶೋಧನಾ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕೆಎಎಲ್ಇ ಜೆಎನ್ಎಂಸಿಯ ರೋಗವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ.ಗಂಗಾ ಎಸ್.ಪಿಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ರೆಪರ್ಟರಿ ವಿಭಾಗದ ಡಾ.ಲಲಿತಾ ಎಸ್.ನಾಡಗೀರ್ ಪರಿಚಯಿಸಿದರು. ಕಾಲೇಜಿನ ನಿರ್ದೇಶಕ ಡಾ.ವಿ.ವಿ. ವರ್ಣೇಕರ್ ಮಾತನಾಡಿದರು.
ಪ್ರಾಂಶುಪಾಲ ಡಾ.ಸಯೀದ್ ಅಹಮದ್, ಸುರಭಿ ಮತ್ತು ಭಾಗ್ಯಲಕ್ಷ್ಮಿ ಕೆ.ವಿ. ಇದ್ದರು. ಸಹರ್ ಖತೀಬ್ ವಂದಿಸಿದರು.
ತೆಲಸಂಗ ವರದಿ
ತೆಲಸಂಗ: ‘ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವಳಂತಹ ವೀರ ನಾರಿಯರು ಜನಸಿದ ನಾಡಿನಲ್ಲಿ ನಾರಿಯ ಶಕ್ತಿ ಸದ್ಬಳಕೆಯಾಗಬೇಕು. ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸಾಮಾಜಿಕ ಅಸಮಾನತೆಗೆ ಉತ್ತರ ಕೊಡಬೇಕು’ ಎಂದು ಬಾಡಗಿಯ ಚಂದ್ರಶೇಖರ ಶಾಲೆಯ ಅಧ್ಯಕ್ಷೆ
ಎಸ್.ಸಿ. ತೇಲಿ ಹೇಳಿದರು.
ಗ್ರಾಮದ ಜ್ಞಾನಭಾರತಿ ಶಾಲೆಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ ಕಟ್ಟುಪಾಡುಗಳಲ್ಲಿ ಇದ್ದದ್ದು ಸಾಕು. ನಮ್ಮ ಮೃದುತ್ವದ ನಡೆ ದುರುಪಯೋಗ ಆಗುತ್ತಿದೆ. ಮುಂದೆ ಅದಕ್ಕೆ ಅವಕಾಶ ಕೊಡಬಾರದು’ ಎಂದರು.
ಸಿಆರ್ಪಿ ಎಸ್.ಡಿ. ಪೂಜಾರಿ, ನಾಗಯ್ಯ ಪೂಜಾರಿ, ಗಪೂರ ಮುಲ್ಲಾ, ರವಿ ನಿಡೋಣಿ, ದಸಕೀರ ಪಕಾಲಿ, ರಾಜು ಅಗಸರ, ಸಿ.ಆರ್. ಕೋಳಿ, ವಿಜಯಲಕ್ಷ್ಮಿ ಪತ್ತಾರ, ದಾನಮ್ಮ ಪಾಟೀಲ, ಕಾಂಚನಾ ನಾಗರಾಳ, ಅಶ್ವಿನಿ ಕುಮಠಳ್ಳಿ, ಗಾಯತ್ರಿ ಕುಂಬಾರ, ಅಮೃತಾ ಕನ್ನೂರ, ಅಂಬಿಕಾ ಬಡ್ಡೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.