ಬೆಳಗಾವಿ: ‘ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳ ಕುರಿತು ಪ್ರಾಮಾಣಿಕವಾಗಿ ಯೋಚಿಸಿ, ಸಮಸ್ಯೆಗಳಿಗೆ ಕಾರಣ ಹುಡುಕಿ ವೈಜ್ಞಾನಿಕ ವಿಧಾನದಲ್ಲಿ ಕಾರ್ಯಸಾಧ್ಯ ಪರಿಹಾರಗಳನ್ನು ಸೂಚಿಸುತ್ತಾ ಯುವ ವಿಜ್ಞಾನಿಗಳಾಗಿ ರೂಪಗೊಳ್ಳುತ್ತಿರುವುದು ಅಭಿನಂದನಾರ್ಹ’ ಎಂದು ಜೆಎಸ್ಎಸ್ ವಿಜ್ಞಾನ ಕಾಲೇಜಿನ ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪ್ರಮೋದ ಹನಮಗೊಂಡ ಹೇಳಿದರು.
ಇಲ್ಲಿನ ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪದವಿಪೂರ್ವ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ಎಳೆಯ ವಯಸ್ಸಿನಲ್ಲಿಯೇ ವೈಜ್ಞಾನಿಕ ವಿಧಾನವನ್ನು ಅರಿತುಕೊಂಡಿರುವ ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳಾಗಲಿ’ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೇಸ್ ಕಾರ್ಯದರ್ಶಿ ರಾಜನಂದ ಘಾರ್ಗಿ ಮಾತನಾಡಿ, ‘ಯುವ ವಿಜ್ಞಾನಿ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವಲ್ಲಿ ಸಹಕಾರಿಯಾಗಿದೆ’ ಎಂದರು.
ಆರ್.ಎಲ್.ಎಸ್. ಕಾಲೇಜಿನ ಮಹಮ್ಮದ್ ಕೈಪ್ ಮುಲ್ಲಾ ಪ್ರಥಮ, ಬೆನ್ಸನ್ ಶಾಲೆಯ ರುಷದಾ ಭಾಗವಾನ ದ್ವಿತೀಯ ಹಾಗೂ ಎಸ್.ಎಸ್. ಪ್ರೌಢಶಾಲೆಯ ಶಶಿಕಾಂತ ಗಾಡಿವಡ್ಡರ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಅವರು ಕ್ರಮವಾಗಿ ₹ 5ಸಾವಿರ, ₹ 3ಸಾವಿರ ಹಾಗೂ ₹ 2 ಸಾವಿರ ನಗದು ಬಹುಮಾನ ಪಡೆದರು.
ಎಸ್ಜಿಬಿಐಟಿ ಉಪನ್ಯಾಸಕ ಡಾ.ಸಾಗರ ವಾಗ್ಮೋರೆ, ವಿಜ್ಞಾನ ವಿಷಯ ಪರಿವೀಕ್ಷಕ ಐ.ಟಿ. ಹಿರೇಮಠ ಇದ್ದರು.