ರಾಮದುರ್ಗ: ರಾತ್ರಿ ವೇಳೆ ಹೊಲದಲ್ಲಿ ಮಲಗಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಎಂ. ಕಲ್ಲಾಪೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಎಂ. ಕಲ್ಲಾಪೂರ ಗ್ರಾಮದ ಫಕೀರಗೌಡ ಶಿವನಗೌಡ ಪಾಟೀಲ (35) ಕೊಲೆಯಾದವರು. ಕೊಲೆಗಾರರು ಯಾರು ಎಂಬುದು ಗೊತ್ತಾಗಿಲ್ಲ. ಕೊಲೆಗೆ ಕಾರಣವೂ ತಿಳಿದು ಬಂದಿಲ್ಲ. ಆದರೆ ಹಿಂದಿನ ದ್ವೇಷವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಗಳು ಕೊಲೆ ಮಾಡಿರಬಹುದು ಎಂದು ಕೊಲೆಯಾದ ವ್ಯಕ್ತಿ ಸಹೋದರ ನಿಂಗನಗೌಡ ಪಾಟೀಲ ಪೊಲೀಸರಿಗೆ ದೂರು ನೀಡಿದ್ದಾರೆ.
ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ಶಿವಾನಂದ ಕಾರಜೋಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಮದುರ್ಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ.