ಬೆಳಗಾವಿ: ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಮಾನವ ಸರಪಳಿ ರಚಿಸಿ ರಕ್ಷಿಸಿದ ಘಟನೆ ಭಾನುವಾರ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿ ನಡೆದಿದೆ.
ಜೋರು ಮಳೆಯಿಂದಾಗಿ ರಭಸದಿಂದ ಹರಿಯುತ್ತಿದ್ದ ಹಳ್ಳ ದಾಟಲು ವ್ಯಕ್ತಿ ಯತ್ನಿಸಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು.
ಮೊದಲು ಸವಾರನನ್ನು ರಕ್ಷಿಸಿ, ಬಳಿಕ ದ್ವಿಚಕ್ರವಾಹನವನ್ನು ದಡಕ್ಕೆ ತಂದರು. ನಂತರ, ದುಸ್ಸಾಹಸಕ್ಕೆ ಮುಂದಾಗಿದ್ದ ವ್ಯಕ್ತಿಗೆ ಎರಡೇಟು ನೀಡಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
‘ಆ ವ್ಯಕ್ತಿ ಬೇರೆ ಊರಿನವರಾಗಿದ್ದರು. ರಕ್ಷಿಸುವ ಭರದಲ್ಲಿ ಅವರ ಹೆಸರು ತಿಳಿದುಕೊಳ್ಳಲಿಲ್ಲ’ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸುಕ್ಷೇತ್ರ ಯಲ್ಲಮ್ಮನ ಗುಡ್ದದ ಹಳ್ಳ–ಕೊಳ್ಳಗಳು ತುಂಬಿವೆ. ಎಣ್ಣೆ ಹೊಂಡ ತುಂಬಿ ಹರಿಯಿತು. ಉಗರಗೋಳ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿನ ಬೆಳೆಗಳು ಜಲಾವೃತವಾಗಿವೆ.