ಹೊಸಪೇಟೆ: ‘ಅಖಂಡ ಭಾರತದಿಂದ ಪಾಕಿಸ್ತಾನ ವಿಭಜನೆ ಆಗುವುದೇ ಲೇಸು ಎಂಬ ಅಭಿಪ್ರಾಯ ಡಾ.ಬಿ.ಆರ್. ಅಂಬೇಡ್ಕರ್ ಹೊಂದಿದ್ದರು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಎಂ. ಲೋಕೇಶ್ ತಿಳಿಸಿದರು.
ಶುಕ್ರವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಚರಿತ್ರೆ ವಿಭಾಗ ಹಮ್ಮಿಕೊಂಡಿದ್ದ ಬಸವೇಶ್ವರ ವಿದ್ಯಾವರ್ಧಕ ಸಂಘ ದತ್ತಿನಿಧಿಯಲ್ಲಿ ‘ಭಾರತದ ವಿಭಜನೆ–ಡಾ.ಬಿ.ಆರ್. ಅಂಬೇಡ್ಕರ್ ಅವರ ನೆಲೆಯಲ್ಲಿ’ ವಿಷಯದ ಕುರಿತು ಉಪನ್ಯಾಸ ನೀಡಿದರು.
‘ಪಾಕಿಸ್ತಾನದ ಉದಯದಿಂದ ಭಾರತ ಆರ್ಥಿಕ, ರಾಜಕೀಯವಾಗಿ ಇನ್ನಷ್ಟು ಸದೃಢವಾಗಬಹುದು ಹೊರತು ಅದರಿಂದ ಏನೂ ಹಾನಿಯಾಗುವುದಿಲ್ಲ. ಒಂದುವೇಳೆ ವಿಭಜನೆ ಆಗದಿದ್ದರೆ ಕೋಮುದ್ವೇಷ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು ಎಂದು ಅಂಬೇಡ್ಕರ್ ಅವರು ಆತಂಕ ವ್ಯಕ್ತಪಡಿಸಿದ್ದರು’ ಎಂದು ನೆನಪಿಸಿದರು.
ಕುಲಪತಿ ಪ್ರೊ.ಸ.ಚಿ. ರಮೇಶ, ‘ಪಾಕಿಸ್ತಾನದ ವಿಭಜನೆ ರಾಜಕೀಯ ವಿಷಯ ಹೊರತು ಅದರಲ್ಲಿ ಪಾಪ, ಅನೈತಿಕ ಅಂಶ ಬರುವುದೇ ಇಲ್ಲ. ಭಾರತ ವಿಭಜನೆ ಆಗಬೇಕೆಂಬ ನಿಲುವು ಅಂಬೇಡ್ಕರ್ ಅವರದಾಗಿತ್ತು. ಅದಕ್ಕೆ ಕಾರಣ ಅಂದಿನ ಸಾಮಾಜಿಕ, ರಾಜಕೀಯ ಸ್ಥಿತಿಗತಿ’ ಎಂದು ಹೇಳಿದರು.
ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ, ‘ವಿಭಜನೆ ಮನೆಯಿಂದ ಪ್ರಾರಂಭವಾಗಿ ಗಡಿಗಳವರೆಗೆ ಮುಂದುವರೆಯುತ್ತದೆ. ಸಂಸ್ಕೃತಿ, ಭಾಷೆ, ಧರ್ಮ, ಜನಾಂಗಗಳಿಂದ ವಿಭಜನೆ ಉಂಟಾಗುತ್ತದೆ’ ಎಂದರು.
ಚರಿತ್ರೆ ವಿಭಾಗದ ಮುಖ್ಯಸ್ಥ ಎನ್. ಚಿನ್ನಸ್ವಾಮಿ ಸೋಸಲೆ, ಸಂಶೋಧನಾ ವಿದ್ಯಾರ್ಥಿಗಳಾದ ಶಿವರಾಜ, ನಿರ್ಮಲಾ ಇದ್ದರು.