ಬಳ್ಳಾರಿ: ಹಣ ದುರ್ಬಳಕೆ ಆರೋಪದ ಮೇರೆಗೆ ಸೇವೆಯಿಂದ ವಜಾ ಮಾಡಿ ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ವ್ಯವಸ್ಥಾಪಕರು ಬುಧವಾರ ಹೊರಡಿಸಿದ್ದ ಆದೇಶವನ್ನು ಪಡೆಯದೇ ನಗರದ ಮೊದಲನೇ ಡಿಪೋ ಕಿರಿಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಆತ್ಮಹತ್ಯೆಗೆ ಯತ್ನಿಸಿದ್ದು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂರು ವರ್ಷದ ಹಿಂದೆ ನಡೆದಿದ್ದ ಬಸ್ಪಾಸ್ ಹಣ ದುರ್ಬಳಕೆ ಸಂಬಂಧ ಹಿಂದಿನ ಸಂಚಾರ ನಿಯಂತ್ರಕ, ಈಗಿನ ಕಂಡಕ್ಟರ್ ಪಾರ್ಥಯ್ಯ ಮತ್ತು ಅಧೀಕ್ಷಕ ಶಿವಮೂರ್ತಿ ಎಂಬುವವರನ್ನೂ ಬುಧವಾರವೇ ಸೇವೆಯಿಂದ ವಜಾಗೊಳಿಸಲಾಗಿದೆ.
ವಜಾ ಆದೇಶ ಪತ್ರವನ್ನು ಸಿಬ್ಬಂದಿ ನೀಡಲು ತೆರಳಿದಾಗ ಮಲ್ಲಿಕಾರ್ಜುನ, ಕಾಲಾವಕಾಶ ಕೇಳಿ ಮನೆಗೆ ತೆರಳಿ ಕ್ರಿಮಿನಾಶಕ ಸೇವಿಸಿದರು. ಅದಕ್ಕೂ ಮುನ್ನ ಕಾರ್ಮಿಕ ಸಂಘಟನೆಯ ಮುಖಂಡರಿಗೆ ಕರೆ ಮಾಡಿ, ವಜಾ ಆದೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು ಎಂದು ಮುಖಂಡ ಆದಿಮೂರ್ತಿ ತಿಳಿಸಿದರು.
ಮಲ್ಲಿಕಾರ್ಜುನ ಅವರಿಂದ ಹೇಳಿಕೆ ಪಡೆಯಲು ಕೌಲ್ಬಜಾರ್ ಠಾಣೆಯ ಪೊಲೀಸರು ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ಕಾಯುತ್ತಿದ್ದರು.