ಹೊಸಪೇಟೆ (ವಿಜಯನಗರ): ಬಹುಜನ ಸಾಹಿತ್ಯ ಅಕಾಡೆಮಿಯ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ ಭಾನುವಾರ ನಗರದಲ್ಲಿ ಜರುಗಿತು.
ನಿವೃತ್ತ ಪ್ರಾಧ್ಯಾಪಕ ಲಕ್ಷ್ಮಣ ತೆಲಗಾವಿ ಅವರು ಉದ್ಘಾಟಿಸಿ, ‘ಬಹುಜನ ಸಾಹಿತ್ಯ ಅಕಾಡೆಮಿಯು ಉತ್ತಮ ವಿಚಾರಗಳನ್ನು ಹರಡಿ, ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಪುರಸ್ಕರಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.
‘ವಿಜಯನಗರ ಸಾಮ್ರಾಜ್ಯದ ಅನೇಕ ವಿಷಯಗಳನ್ನು ಉತ್ತರ ಭಾರತದ ವಿದ್ವಾಂಸರು ಕಡೆಗಣಿಸಿದ್ದಾರೆ. ಅದನ್ನು ಬೆಳಕಿಗೆ ತರುವ ಕೆಲಸ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೆಲಸ ಸೇರಿದಾಗ ಮಾಡಿದ್ದೆವು. ಅಂತಹ ಕೆಲಸಗಳು ನಿರಂತರವಾಗಿ ಆಗುತ್ತಿರಬೇಕು’ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ, ಅಕಾಡೆಮಿಯ ಸದಸ್ಯೆ ಸಿದ್ದಗಂಗಮ್ಮ ಮಾತನಾಡಿ, ‘ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ. ಪ್ರತಿಭಾನ್ವಿತರನ್ನು ಗುರುತಿಸುವ ಅಕಾಡೆಮಿಯ ಯೋಜನೆಗಳ ಸದುಪಯೋಗವನ್ನು ಈ ಭಾಗದವರು ಪಡೆದುಕೊಳ್ಳಬೇಕು’ ಎಂದರು.
ಅಕಾಡೆಮಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಎನ್.ಡಿ. ವೆಂಕಮ್ಮ, ‘ಅಕಾಡೆಮಿಯು ಬರುವ ದಿನಗಳಲ್ಲಿ ಈ ಭಾಗದ ಕಾಲೇಜು, ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರ ಉದ್ದೇಶ ಎಲ್ಲರಿಗೂ ತಿಳಿಸಬೇಕು’ ಎಂದು ಹೇಳಿದರು.
ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷ ಎ ವೆಂಕಟೇಶ್, ಭರತ್ ಗುಂಡಿ, ಪ್ರಾಧ್ಯಾಪಕರಾದ ಅಮರೇಶ ಯತಗಲ್, ಗೋವಿಂದ, ಗುರುರಾಜ ಇದ್ದರು.