ಹೊಸಪೇಟೆ: ನಗರದ ಆನೆಗೊಂದಿ ಸಂಸ್ಥಾನದ ಚಿಂತಾಮಣಿ ಮಠಾಧೀಶ ಬಾಲ ಚಿಂತಾಮಣಿ ಸ್ವಾಮೀಜಿ (76) ಶನಿವಾರ ಬೆಳಿಗ್ಗೆ ನಿಧನರಾದರು.
ಅವರು ಆನೆಗೊಂದಿ ಸಂಸ್ಥಾನದ ಚಿಂತಾಮಣಿ ಮಠದ 16ನೇ ಪೀಠಾಧಿ ಪತಿಯಾಗಿ 40ವರ್ಷಗಳ ಹಿಂದೆ ಪೀಠಾರೋಹಣ ಮಾಡಿದ್ದರು. ಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಠವನ್ನು ಅಭಿವೃದ್ಧಿ ಮಾಡಿದ್ದರು.
ನೂರಾರು ಬ್ರಾಹ್ಮಣ ವಟುಗಳಿಗೆ ಪ್ರತಿವರ್ಷ ಉಚಿತ ಉಪನಯ, ಧರ್ಮ ಸಂಸ್ಕಾರ ಕಾರ್ಯ ಕ್ರಮ ನಡೆಸುತ್ತಾ ಬಂದಿದ್ದರು.
ಮಠದ ಆವರಣದಲ್ಲಿ ಬಾಲ ಚಿಂತಾಮಣಿ ಸ್ವಾಮೀಜಿ ಅವರ ಬೃಂದಾ ವನಸ್ಥ ಕಾರ್ಯ ನಡೆಯಿತು. ಪುರೋಹಿತ ಮೋಹನ್ ಚಿಕ್ಭಟ್ ಜೋಷಿ ಅವರ ಸಾರಥ್ಯದಲ್ಲಿ ಅಂತಿಮ ಧಾರ್ಮಿಕ ವಿಧಿವಿಧಾನಗಳು ನಡೆದವು.
ಹಂಪಿಯ ಆನೆಗೊಂದಿ ಸಂಸ್ಥಾನದ ರಾಜವಂಶಸ್ಥರಾದ ಕೃಷ್ಣದೇವರಾಯರು ಸೇರಿದಂತೆ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಮತ್ತು ಮಠದ ಭಕ್ತರು ಭಾಗವಹಿಸಿದ್ದರು.