ಹೊಸಪೇಟೆ: ’ರಾಜ್ಯದಲ್ಲಿ 50 ಲಕ್ಷ ಬಲಿಜ ಸಮುದಾಯಕ್ಕೆ ಸೇರಿದವರಿದ್ದಾರೆ. ಆದರೆ, ಸಮಾಜದ ಜನಸಂಖ್ಯೆಗೆ ತಕ್ಕಂತೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ‘ ಎಂದು ಬಲಿಜ ಸಂಘದ ಯುವ ಸಂಘಟನಾ ಕಾರ್ಯದರ್ಶಿ ಕಲಾಚಂದ್ರ ಬೇಸರ ವ್ಯಕ್ತಪಡಿಸಿದರು.
ಬಲಿಜ ಸಂಘವುಇಲ್ಲಿನಬಲಿಜ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೈವಾರ ಕ್ಷೇತ್ರದ ಯೋಗಿನಾರೇಯಣ ಯತೀಂದ್ರರ 184ನೇ ಆರಾಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
’ಸಮುದಾಯಕ್ಕೆ ಸೇರಿದ ಪಿ.ಸಿ. ಮೋಹನ್ ರಾಜ್ಯದಿಂದ ಆಯ್ಕೆಯಾದ ಏಕೈಕ ಸಂಸದರಿದ್ದಾರೆ. ಅವರಿಗೆ ಸಂಪುಟದಲ್ಲಿ ಸ್ಥಾನ ಕೊಡಬೇಕಿತ್ತು. ಆದರೆ ನೀಡಿಲ್ಲ. ರಾಜ್ಯದಲ್ಲೂ ಇದೇ ಸ್ಥಿತಿ ಇದೆ‘ ಎಂದು ಹೇಳಿದರು.
’1994ರಲ್ಲಿ ಅಂದಿನ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ 2ಎ ದಿಂದ ಸಮಾಜವನ್ನು ತೆಗೆದು ಹಾಕಿದರು. 2011ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ 2ಎ ಮೀಸಲಾತಿ ನೀಡಿದರು‘ ಎಂದರು.
ಬಲಿಜ ಸಂಘದ ಅಧ್ಯಕ್ಷ ಟಿ.ರವಿಕುಮಾರ ಮಾತನಾಡಿ, ’ಯೋಗಿ ನಾರೇಯಣ ಅವರು ಸತ್ಯ ಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಜಾಗೃತಿ ಮೂಡಿಸಿದರು. ಜನರು ಉತ್ತಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿದರು. ಕೈವಾರ ಎಂಬುದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪುಣ್ಯ ಕ್ಷೇತ್ರ. ದ್ವಾಪರ ಯುಗದಲ್ಲಿ ಅದು ಏಕ ಚಕ್ರನಗರ ಎಂಬ ಹೆಸರಿನಿಂದ ಖ್ಯಾತಿ ಗಳಿಸಿತ್ತು‘ ಎಂದು ಹೇಳಿದರು.
’ಪಾಂಡವರು ವನವಾಸದಲ್ಲಿದ್ದಾಗ ಚಕ್ರನಗರಕ್ಕೆ ಬಂದಿದ್ದರು. ಅವರ ಕಾಲದಲ್ಲಿಯೇ ಭೀಮಲಿಂಗೇಶ್ವರ ದೇವಸ್ಥಾನ ಸ್ಥಾಪನೆಗೊಂಡಿತ್ತು. ಹಾಗಾಗಿ ಅದನ್ನು ಕೈವಾರನಾಡು ಎಂದು ಕರೆಯಲಾಗುತ್ತದೆ. ಯೋಗಿ ನಾರೇಯಣ ಜನ್ಮತಾಳಿದ ಸ್ಥಳ‘ ಎಂದು ತಿಳಿಸಿದರು.
ಇದೇ ವೇಳೆ ಸಮಾಜದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಬಲಿಜ ಯುವ ಸೇನೆಯ ಅಧ್ಯಕ್ಷ ಕುಡುತಿನಿ ವೀರಣ್ಣ, ಬಲಿಜ ಮಹಿಳಾ ಸಮುದಾಯದ ಅಧ್ಯಕ್ಷೆ ಗೀತಾ ಶಂಕರ, ಮುಖಂಡರಾದ ಸಾಂಬಶಿವರಾಜ್, ಹಾದಿಮನಿ ಕಾಳಿಂಗ ವರ್ಧನ ಇದ್ದರು.