ಸಿರುಗುಪ್ಪ:ಡಿ.15ರಿಂದ ಕಬ್ಬು ಕಟಾವು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್ ಬೆಳೆಗಾರರಿಗೆ ನೀಡಿದ್ದ ಭರವಸೆ ಈಡೇರಿಲ್ಲ. ಕಟಾವು ಮಾಡುವವರಿಗಾಗಿ ಬೆಳೆಗಾರರು ಶನಿವಾರವಿಡೀ ಕಾದು ಬಸವಳಿದರು.
ಇಲ್ಲಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ನೇತೃತ್ವದಲ್ಲಿ ಕಟಾವು ಕಾರ್ಯ ಆರಂಭವಾಗಬೇಕಿತ್ತು. ಕಾರ್ಖಾನೆಯವರ ಕೂಲಿಗಳನ್ನು ಕಳಿಸದೇ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ಕೆಲವು ದಿನ ಕಾದು ನೋಡಿ ಪ್ರತಿಭಟನೆ ನಡೆಸಲು ಬೆಳೆಗಾರರು ಚಿಂತನೆ ನಡೆಸಿದ್ದಾರೆ.
‘ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಂತೆ ಕಬ್ಬು ಕಟಾವು ಆರಂಭವಾಗಲಿಲ್ಲ. ಕಾರ್ಖಾನೆಯವರ ಕಡೆಯಿಂದ ಕೂಲಿಕಾರರಾಗಲೀ ಸಾಗಾಣಿಕೆ ಮಾಡುವ ಲಾರಿಗಳಾಲೀ ಕಬ್ಬಿನ ಗದ್ದೆಗಳತ್ತ ಸುಳಿಯಲಿಲ್ಲ’ ಎಂದು ಸಿರುಗುಪ್ಪ ಮತ್ತು ಸಿಂಧನೂರು ತಾಲ್ಲೂಕಿನ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಗೌಸ್ ಬೇಸರ ವ್ಯಕ್ತಪಡಿಸಿದರು.
‘ನಮ್ಮ ಭಾಗದ ಕಬ್ಬನ್ನು ಖರೀದಿಸಲು ಬೇರೆ ಕಾರ್ಖಾನೆಗಳು ಮುಂದೆ ಬಂದು ಒಪ್ಪಂದ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಹೊರಗಡೆಯ ಕಾರ್ಖಾನೆಗಳಲ್ಲೇ ಅಧಿಕ ಕಬ್ಬು ಶೇಖರವಾಗಿರುವುದೂ ಇದಕ್ಕೆ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಎರಡು ದಿನಗಳ ಹಿಂದೆ ಕಾರ್ಖಾನೆಯ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿದ್ದರು, ಕಟಾವು ಬಗ್ಗೆ ಮಾಹಿತಿ ನೀಡಿ ಹೋದರು. ನಂತರ ಸಂಪರ್ಕಿಸಲಿಲ್ಲ’ ಎಂದು ಇಬ್ರಾಂಪುರ ಗ್ರಾಮದ ಕಬ್ಬು ಬೆಳೆಗಾರ ವಿ.ಜಂಬನಗೌಡ ಅಸಹಾಯಕತೆ ವ್ಯಕ್ತಪಡಿಸಿದರು.