ಮರಿಯಮ್ಮನಹಳ್ಳಿ (ಹೊಸಪೇಟೆ ತಾಲ್ಲೂಕು)/ಹಗರಿಬೊಮ್ಮನಹಳ್ಳಿ: ‘2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪಂಚಮಸಾಲಿ ಸಮಾಜದವರು ನಡೆಸುತ್ತಿರುವ ಹೋರಾಟವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸ್ಪಂದನೆ ತೋರದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸಲ್ಲದು. ಇದೇ ಧೋರಣೆ ತೋರಿದರೆ ಬರುವ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಕೂಡಲಸಂಗಮದಿಂದ ಆರಂಭಗೊಂಡಿರುವ ಪಾದಯಾತ್ರೆ ಶುಕ್ರವಾರ ತಾಲ್ಲೂಕಿನ ಮರಿಯಮ್ಮನಹಳ್ಳಿ ಗಡಿ ದಾಟಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪ್ರವೇಶಿಸಿತು. ಒಂಬತ್ತು ದಿನಗಳಲ್ಲಿ ಒಟ್ಟು 230 ಕಿ.ಮೀ. ಪಾದಯಾತ್ರೆ ಪೂರೈಸಿದೆ.
‘ಮುಖ್ಯಮಂತ್ರಿಗಳು ಹಿಂದುಳಿದ ವರ್ಗದಿಂದ ಮಾಹಿತಿಯನ್ನು ತರಿಸಿಕೊಂಡು, ಕೂಡಲೇ 2ಎ ಮೀಸಲಾತಿ ಕೊಡಬೇಕು. ಇಲ್ಲವಾದಲ್ಲಿ ಹರಿಹರದಲ್ಲಿ ಜ. 28ರಂದು ನಡೆಯಲಿರುವ ಸಮಾವೇಶದಲ್ಲಿ ಕಠೋರ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.
ಇನ್ನು ಮರಿಯಮ್ಮನಹಳ್ಳಿಯಲ್ಲಿ ಮಾತನಾಡಿದ ಶಾಸಕ ಎಲ್.ಬಿ.ಪಿ. ಭೀಮಾ ನಾಯ್ಕ, ‘ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಒಂದುವೇಳೆ ಎಲ್ಲ ಪಂಚಮಸಾಲಿ ಸಮಾಜದ ಶಾಸಕರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜೀನಾಮೆ ಕೊಟ್ಟರೆ ನಾನು ಅವರ ಹಾದಿ ತುಳಿಯಲು ಸಿದ್ಧನಿದ್ದೇನೆ’ ಎಂದರು.