ಬಳ್ಳಾರಿ: ಕಡಿಮೆ ಬಡ್ಡಿ ದರದಲ್ಲಿ ₹ 10 ಸಾವಿರ ಸಾಲ ನೀಡಲಾಗುತ್ತದೆ ಎಂಬ ಪ್ರಕಟಣೆ ಮೇರೆಗೆ ನಗರದ ಗೌತಮ ನಗರದ ನಿವಾಸಿಗಳು ಇಲ್ಲಿನ ಗಡಿಗಿ ಚೆನ್ನಪ್ಪ ವೃತ್ತದಲ್ಲಿರುವ ಸುಕೋ ಬ್ಯಾಂಕ್ ಮುಂಭಾಗ ಗುರುವಾರ ಬೆಳಿಗ್ಗೆಯೇ ನೆರೆದಿದ್ದರು.
ಏಕಾಏಕಿ ಗುಂಪು ಸೇರಿದ ಜನರನ್ನು ವಾಪಸ್ ಕಳಿಸಲು ಪೊಲೀಸರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
'ಬ್ಯಾಂಕ್ ತೆರೆಯುವವರೆಗೂ ನಾವು ಇಲ್ಲೇ ಇರುತ್ತೇವೆ. ವ್ಯವಸ್ಥಾಪಕರು ಬರುವವರೆಗೂ ಹೋಗುವುದಿಲ್ಲ' ಎಂದು ಜನ ಪಟ್ಟುಹಿಡಿದು ನಿಂತರು.
'ಗುಂಪು ಸೇರಿದರೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯ ಬೇಕಾಗುತ್ತದೆ' ಎಂದು ಪೊಲೀಸರು ಎಚ್ಚರಿಕೆ ನೀಡಿದ ಜನ ಚದುರಿದರು.
ಅಸಮಾಧಾನ:'ಸಾಲ ಕೊಡುತ್ತೇವೆ ಎಂದಿದ್ದಕ್ಕೆ ಬಂದಿದ್ದೇವೆ. ಈಗ ನೋಡಿದರೆ ಲಾಕ್ ಡೌನ್ ಮುಗಿವವರೆಗೂ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಅಲ್ಲಿವರೆಗೂ ಬಡವರು ಹೇಗೆ ಬದುಕಬೇಕು' ಎಂದು ಗೌತಮನಗರದ ಹೊನ್ನೂರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶರಾವ್, ಲಾಕ್ ಡೌನ್ ಅವಧಿ ಮುಗಿದ ಬಳಿಕ ಅರ್ಜಿದಾರ ದಾಖಲೆ, ವಾಸಸ್ಥಳ ಪರಿಶೀಲನೆ ನಡೆಸಿ ಸಾಲ ವಿತರಿಸಲಾಗುವುದು. ಅಲ್ಲಿವರೆಗು ತಾಳ್ಮೆಯಿಂದ ಕಾಯಲೇಬೇಕು ಎಂದರು.