ಹೊಸಪೇಟೆ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 35 (ಎ), 370ನೇ ವಿಧಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಂಜೆ ನಗರದ ರೋಟರಿ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು.
ಪಟಾಕಿ ಸಿಡಿಸಿ, ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ನಂತರ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು.
ಬಳಿಕ ಮಾತನಾಡಿದ ಪಕ್ಷದ ಮುಖಂಡ ಭರಮನಗೌಡ, ‘ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದ್ದರೂ ಒಂದರ್ಥದಲ್ಲಿ ಬೇರೆಯಾಗಿತ್ತು. ಆದರೆ, ಕೇಂದ್ರ ಸರ್ಕಾರದ ನಿರ್ಧಾರದಿಂದ ಅದು ಬದಲಾಗಿದೆ. ಇದೊಂದು ಐತಿಹಾಸಿಕವಾದ ದಿಟ್ಟ ನಿರ್ಧಾರ. ಈ ತೀರ್ಮಾನದಿಂದ ಕಾಶ್ಮೀರದಲ್ಲಿ ಉಗ್ರವಾದಕ್ಕೆ ಕಡಿವಾಣ ಬೀಳಲಿದೆ. ರಾಜ್ಯದ ಪ್ರಗತಿಗೆ ಸಹಕಾರಿಯಾಗಲಿದೆ’ ಎಂದು ಹೇಳಿದರು.
ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಮುಖಂಡರಾದ ಸಾಲಿ ಸಿದ್ದಯ್ಯ, ಶಂಕರ್ ಮೇಟಿ, ರಾಘವೇಂದ್ರ, ಅಶೋಕ ಜೀರೆ, ಗಾದಿಲಿಂಗಪ್ಪ, ಗೋಸಲ ಭರಮಪ್ಪ, ಚಂದ್ರಕಾಂತ ಕಾಮತ್ ಇದ್ದರು.