ಬಳ್ಳಾರಿ: ‘ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಅಂತರರಾಜ್ಯ ಗಡಿ ವಿವಾದವನ್ನು ಉಭಯ ರಾಜ್ಯಗಳ ಒಪ್ಪಿಗೆ ಮೇರೆಗೆ ಬಗೆಹರಿಸಲಾಗಿದೆ’ ಎಂದು ಆಂಧ್ರಪ್ರದೇಶದ ‘ಜಿಯೊ ಸ್ಪಾಟಿಕಲ್ ಡೇಟಾ ಸೆಂಟರ್’ (ಎಪಿ ಆ್ಯಂಡ್ ಟಿಜಿಡಿಸಿ) ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಭೂದಾಖಲೆಗಳ ಉಪನಿರ್ದೇಕರಿಗೆ (ಡಿಡಿಎಲ್ಆರ್) ಬರೆದಿರುವ ಪತ್ರದಲ್ಲಿ ತಿಳಿಸಿದೆ.
ಉಭಯ ರಾಜ್ಯಗಳಪ್ರತಿಪಾದನೆಯನ್ನು ಆಧರಿಸಿ ಸರ್ವಸಮ್ಮತವಾಗಿ ಗಡಿಯನ್ನು ಗುರುತಿಸಲಾಗಿದೆ ಎಂದು ಡಿಸೆಂಬರ್ 10ರಂದು ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಇದರೊಂದಿಗೆ ಗಡಿ ಗುರುತಿಸುವ ಕಾರ್ಯದಪುನರ್ ಪರಿಶೀಲನೆ ಪ್ರಶ್ನೆಗೆ ವಿರಾಮ ಬಿದ್ದಂತಾಗಿದೆ.ಕರ್ನಾಟಕ ಹಾಗೂ ಆಂಧ್ರ ನಡುವಿನ ಅಂತರರಾಜ್ಯ ಗಡಿಯನ್ನು ನಿಖರವಾಗಿ ಗುರುತಿಸಿಲ್ಲ ಎಂದು ಅಕ್ರಮ ಗಣಿಗಾರಿಕೆ ವಿರೋಧಿ ಹೋರಾಟಗಾರ ಟಪಾಲ್ ಗಣೇಶ್ ಆಕ್ಷೇಪ ಎತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳ ತಾಂತ್ರಿಕ ಸಲಹೆಗಾರರಾದ ಡಿಡಿಎಲ್ಆರ್, ಹೈದರಾಬಾದ್ನಲ್ಲಿರುವ ಡೆಪ್ಯುಟಿ ಸರ್ವೇಯರ್ ಜನರಲ್ಗೆ ಪತ್ರ ಬರೆದಿದ್ದರು.
‘ಗಡಿ ಗುರುತಿಸುವಾಗ ಮೂಲ ಗಡಿ ಕಲ್ಲುಗಳನ್ನು ಪರಿಗಣಿಸಿಲ್ಲ. 63ರಿಂದ 67ನೇ ಸಂಖ್ಯೆಯ ಗಡಿ ಕಲ್ಲುಗಳನ್ನು ಪಲ್ಲಟ ಮಾಡಲಾಗಿದೆ. ಕರ್ನಾಟಕದ ಕಡೆ 400 ಮೀಟರ್ ವ್ಯತ್ಯಾಸವಾಗಿದೆ. ಇದರಿಂದಾಗಿ ಅಕ್ರಮ ಗಣಿಗಾರಿಕೆ ಸಕ್ರಮಗೊಳ್ಳಲಿದೆ’ ಎಂದು ಟಪಾಲ್ ಗಣೇಶ್ ಆಕ್ಷೇಪ ಎತ್ತಿದ್ದರು. ಈ ಅಂಶವನ್ನು ಡಿಡಿಎಲ್ಆರ್ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದರು.
ಗಡಿ ಗುರುತಿಸುವಲ್ಲಿ ಲೋಪವಾಗಿದೆ ಎಂದು ಟಪಾಲ್ ಗಣೇಶ್, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಗಡಿ ಗುರುತಿಸುವ ಕಾರ್ಯದಲ್ಲಿ ಲೋಪವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಡಿಡಿಎಲ್ಆರ್ ಅವರಿಂದ ಎರಡು ಪತ್ರಗಳು ಸರ್ವೆ ಆಫ್ ಇಂಡಿಯಾಕ್ಕೆ ಹೋದ ಬಳಿಕ, ಉತ್ತರ ಬಂದಿದೆ. ಇದರಿಂದ ಅಂತರರಾಜ್ಯ ಗಡಿ ಗುರುತಿಸುವಿಕೆ ಕಾರ್ಯ ಅಂತಿಮಗೊಂಡಂತಾಗಿದೆ.
ಆರ್ಟಿಐ ಅರ್ಜಿ ವಿಲೇವಾರಿ
ಗಡಿ ಗುರುತಿಸುವಿಕೆಗೆ ಅನುಸರಿಸಿದ ಮಾನದಂಡಗಳು, ಯಾವ ಸ್ಕೆಚ್, ನಕ್ಷೆಗಳ ಆಧರಿಸಿ ಗಡಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡುವಂತೆ ಕೇಳಿ ಟಪಾಲ್ ಗಣೇಶ್ ಸಲ್ಲಿಸಿದ್ದ ಅರ್ಜಿಯನ್ನುಎಪಿ ಆ್ಯಂಡ್ ಟಿಜಿಡಿಸಿ ವಿಲೇವಾರಿ ಮಾಡಿದೆ.
‘ನೀವು ಕೇಳಿರುವ ಮಾಹಿತಿಯು ವರ್ಗೀಕರಣ ಮಾಹಿತಿ ಆಗಿರುವುದರಿಂದ ಆರ್ಟಿಐ ಕಾಯ್ದೆಯಡಿ ಕೊಡಲು ಬರುವುದಿಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.
*
ಸರ್ವೇಯರ್ ಜನರಲ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ವರದಿಯಲ್ಲಿ ಗಡಿ ಗುರುತಿಸುವಿಕೆಯಲ್ಲಿ ಲೋಪವಾಗಿದ್ದರೆ, ಪರಿಶೀಲಿಸಲಾಗುವುದು ಎಂದಿದೆ.
-ಟಪಾಲ್ ಗಣೇಶ್, ಅಕ್ರಮ ಗಣಿಗಾರಿಕೆ ವಿರೋಧಿ ಹೋರಾಟಗಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.