ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಕ್ಷೇತ್ರ | ಕೊನೇ ಕ್ಷಣದವರೆಗೆ ಮತದಾರರ ಓಲೈಕೆ

ವಿಜಯನಗರ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ
Last Updated 3 ಡಿಸೆಂಬರ್ 2019, 15:55 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ಆರು ಗಂಟೆಗೆ ವಿಧ್ಯುಕ್ತ ತೆರೆ ಬಿತ್ತು.

ಕಾಂಗ್ರೆಸ್‌, ಬಿಜೆಪಿ, ಜೆ.ಡಿ.ಎಸ್‌, ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ಪಕ್ಷೇತರರು ಕೊನೆಯ ವರೆಗೆ ಮತದಾರರನ್ನು ಭೇಟಿ ಮಾಡಿ, ಅವರನ್ನು ಓಲೈಕೆ ಮಾಡಲು ಪ್ರಯತ್ನಿಸಿದರು.

ಕಾಂಗ್ರೆಸ್‌:ಕಾಂಗ್ರೆಸ್‌ ಪಕ್ಷದ ಮುಖಂಡರು ನಗರದ ಏಳು ಕೇರಿಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಪಕ್ಷದ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ, ಎ.ಐ.ಸಿ.ಸಿ. ಕಾರ್ಯದರ್ಶಿ ಡಾ.ಸಾಕೆ ಶೈಲಜನಾಥ್‌, ಶಾಸಕರಾದ ಜೆ.ಎನ್‌. ಗಣೇಶ್‌, ಭೀಮಾ ನಾಯ್ಕ, ಈ. ತುಕಾರಾಂ, ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ಮುಖಂಡರಾದ ವಿ.ಎಸ್‌. ಉಗ್ರಪ್ಪ, ಜೆ.ಎಸ್‌. ಆಂಜನೇಯಲು, ತಾರಿಹಳ್ಳಿ ವೆಂಕಟೇಶ್‌, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಪತ್ರೇಶ್‌ ಹಿರೇಮಠ, ಎಂ.ಬಿ. ಪಾಟೀಲ, ಡಿ. ವೆಂಕಟರಮಣ, ಲಿಯಾಕತ್‌ ಅಲಿ, ಗುಡಿಗುಂಟಿ ಮಲ್ಲಿಕಾರ್ಜುನ ಅವರಿಗೆ ಸಾಥ್‌ ನೀಡಿದರು.

ಬಿಜೆಪಿ:ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌, ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ತಾಲ್ಲೂಕಿನ ಕಮಲಾಪುರದಲ್ಲಿ ರೋಡ್‌ ಶೋ ನಡೆಸಿದರು. ಸಿಂಗ್‌ ಬೆಳಿಗ್ಗೆ ತಾಲ್ಲೂಕಿನ ಕಲ್ಲಹಳ್ಳಿ, ರಾಜಪುರದಲ್ಲಿ ಪ್ರಚಾರ ನಡೆಸಿದರು.

ಕಲ್ಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವ ರೈತರು ತಮ್ಮ ಜಮೀನು ಮಾರಾಟ ಮಾಡಬಾರದು. ಹೊಸಕೋಟೆ ಬಿಜೆಪಿ ಅಭ್ಯರ್ಥಿ ಸಾವಿರಾರು ಕೋಟಿ ರೂಪಾಯಿಯ ಒಡೆಯರು. ಈಗಲೂ ಅವರ ಬಳಿ ಜಮೀನಿದೆ. ಜಮೀನಿಗೆ ಇಂದಲ್ಲ, ನಾಳೆ ಬೆಲೆ ಬರುತ್ತದೆ. ವಿಜಯನಗರ ಜಿಲ್ಲೆಯಾದರೆ ಖಂಡಿತವಾಗಿ ಹೆಚ್ಚಿನ ಬೆಲೆ ಸಿಗುತ್ತದೆ’ ಎಂದರು.

ಜೆಡಿಎಸ್‌:ಜೆಡಿಎಸ್ಅಭ್ಯರ್ಥಿ ಎನ್‌.ಎಂ. ನಬಿ, ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ನೂರ್‌ ಅಹಮ್ಮದ್‌, ಮುಖಂಡ ಆರ್‌. ಕೊಟ್ರೇಶ್‌ ಅವರು ನಗರದ ಪ್ರಮುಖ ಉದ್ಯಾನಗಳು, ಮೈದಾನಗಳಲ್ಲಿ ಮತ ಯಾಚಿಸಿದರು. ಅವರಿಗೆ ಕಾರ್ಯಕರ್ತರು ಸಾಥ್‌ ನೀಡಿದರು.

ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಅವರು ತಾಲ್ಲೂಕಿನ ಕಮಲಾಪುರದಲ್ಲಿ ಟ್ರ್ಯಾಕ್ಟರ್‌ ಓಡಿಸುತ್ತ ಮತ ಯಾಚಿಸಿದರು. ಪಕ್ಷೇತರ ಅಭ್ಯರ್ಥಿಗಳು ನಗರದ ವಿವಿಧ ಕಡೆಗಳಲ್ಲಿ ಪ್ರಚಾರ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT