ಹೊಸಪೇಟೆ (ವಿಜಯನಗರ): ಕೋವಿಡ್ ಲಾಕ್ಡೌನ್ ನಡುವೆಯೂ ನಗರದ ಶ್ರಮಿಕ ಭವನದಲ್ಲಿ ಸಿಪಿಐಎಂ ತಾಲ್ಲೂಕು ಸಮಿತಿಯವರು ಬುಧವಾರ ಕಾರ್ಲ್ ಮಾರ್ಕ್ಸ್ ಅವರ 203ನೇ ಜನ್ಮದಿನ ಆಚರಿಸಿದರು.
ಅಂತರ ಕಾಯ್ದುಕೊಳ್ಳದೆ ಕಾರ್ಲ್ ಮಾರ್ಕ್ಸ್ ಅವರ ಭಾವಚಿತ್ರ, ಪಕ್ಷದ ಬಾವುಟ ಹಿಡಿದುಕೊಂಡು ಜಯಂತಿಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಸಿಪಿಐಎಂ ಜಿಲ್ಲಾ ಸಮಿತಿ ಮುಖಂಡ ಎ. ಕರುಣಾನಿಧಿ, ‘ಕಾರ್ಮಿಕ ವರ್ಗಕ್ಕೆ ಕಾರ್ಲ್ ಮಾರ್ಕ್ಸ್ ಕೊಡುಗೆ ಅಪಾರ. ಭಾರತದಲ್ಲಿ ಮಾರ್ಕ್ಸ್ ಚಿಂತನೆ ಅಪ್ರಸ್ತುತ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇಲ್ಲಿನ ರೈತ ಮತ್ತು ಕಾರ್ಮಿಕ ವರ್ಗ ಇಂದಿಗೂ ಮಾರ್ಕ್ಸ್ವಾದದ ಚಿಂತನೆಗಳ ಅಡಿಯಲ್ಲೇ ಹೋರಾಟಗಳನ್ನು ನಡೆಸುತ್ತಿದೆ’ ಎಂದರು.
ಪಕ್ಷದ ಹಿರಿಯ ಮುಖಂಡ ಎಂ.ಜಂಬಯ್ಯ ನಾಯಕ ಮಾತನಾಡಿ, ‘ಪ್ರಸ್ತುತ ಸಂದರ್ಭದಲ್ಲಿ ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಟ ನಡೆಸುವಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ರಂಗ ಕೇರಳದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಬಿಜೆಪಿ ಖಾತೆ ತೆರೆಯದಂತಾಗಿದೆ. ಮುಂಬರುವ ದಿನಗಳಲ್ಲಿ ಕೇರಳ ಮಾದರಿಯನ್ನು ನಾವು ಅನುಸರಿಸುವತ್ತ ಪ್ರಯತ್ನಿಸಬೇಕಾಗಿದೆ’ ಎಂದರು.