ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ಅಧೀನಕ್ಕೆ ಪಡೆಯಲು ಹಿಂದೇಟು

ನಗರಸಭೆಯ ನಿರಾಸಕ್ತಿಯಿಂದ ಅಭಿವೃದ್ಧಿಗೊಳ್ಳದ ಉದ್ಯಾನಗಳು
ಅಕ್ಷರ ಗಾತ್ರ

ಹೊಸಪೇಟೆ: ನಗರಾಭಿವೃದ್ಧಿ ಪ್ರಾಧಿಕಾರವು ನಗರದ ವಿವಿಧ ಕಡೆ ಅಭಿವೃದ್ಧಿಗೊಳಿಸಿರುವ ವಸತಿ ಪ್ರದೇಶದಲ್ಲಿನ 50 ಉದ್ಯಾನಗಳಿಗೆ ಮೀಸಲಾದ ಜಾಗವನ್ನು ತನ್ನ ಅಧೀನಕ್ಕೆ ಪಡೆಯಲು ನಗರಸಭೆ ಹಿಂದೇಟು ಹಾಕುತ್ತಿದೆ.

2015ರ ಜುಲೈ 16ರಂದು ಪ್ರಾಧಿಕಾರವು ನಗರಸಭೆಗೆ ಪತ್ರ ಬರೆದು, ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ವಶಕ್ಕೆ ಪಡೆಯುವಂತೆ ಕೋರಿದೆ. ಆದರೆ, ಇದುವರೆಗೆ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಒಟ್ಟು 50 ಉದ್ಯಾನಗಳ ಪೈಕಿ ಒಂದೇ ಒಂದು ಉದ್ಯಾನವನ್ನು ಸುಪರ್ದಿಗೆ ಪಡೆದುಕೊಂಡಿಲ್ಲ.

ಪ್ರಾಧಿಕಾರವು ನಗರಸಭೆಗೆ ಪತ್ರ ಬರೆದು ಸುಮಾರು ಮೂರು ವರ್ಷಗಳಾಗುತ್ತ ಬಂದಿದೆ. ಆದರೆ, ಈ ಕುರಿತು ನಗರಸಭೆ ಇಲ್ಲಿಯವರೆಗೆ ಸ್ಪಂದಿಸಿಲ್ಲ. ಹೀಗಾಗಿ ಎಂದೋ ಅಭಿವೃದ್ಧಿಗೊಂಡು ಉದ್ಯಾನಗಳಾಗಿ ಬದಲಾಗಬೇಕಿದ್ದ ಜಾಗಗಳು ಈಗಲೂ ಬಯಲಿನ ಸ್ವರೂಪದಲ್ಲಿವೆ.

ಈ ಕುರಿತು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌ ಅವರನ್ನು ಸಂಪರ್ಕಿಸಿದಾಗ, ‘ಈ ವಿಷಯದ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಅದು ಮುಗಿದ ಬಳಿಕ ಸಭೆಯಲ್ಲಿ ಅನುಮೋದನೆ ಪಡೆದು ಮುಂದುವರೆಯಲಾಗುವುದು’ ಎಂದು ಹೇಳಿದರು.

ವರ್ಷದಿಂದ ವರ್ಷಕ್ಕೆ ನಗರದ ಜನಸಂಖ್ಯೆ ಬೆಳೆಯುತ್ತಿದೆ. ಹಾಲಿ ಇರುವ ಉದ್ಯಾನಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ವಾರಾಂತ್ಯದಲ್ಲಿ ಅಲ್ಲಿ ಹೆಚ್ಚಿನ ಜನಸಂದಣಿ ಇರುತ್ತಿದೆ. ನಿರ್ವಹಣೆಗೆ ಕಷ್ಟವಾಗುತ್ತಿದೆ. ಶ್ರೀರಾಮುಲು, ಟಿ.ಬಿ. ಡ್ಯಾಂ, ನೆಹರೂ ಪಾರ್ಕ್‌ಗಳು ಬಿಟ್ಟರೆ ಬೇರೆ ಉದ್ಯಾನಗಳಿಲ್ಲ. ಅದರಲ್ಲೂ ಶ್ರೀರಾಮುಲು, ನೆಹರೂ ಪಾರ್ಕ್‌ ಉದ್ಯಾನಗಳು ಕಿರಿದಾಗಿವೆ. ಟಿ.ಬಿ. ಡ್ಯಾಂ ಉದ್ಯಾನ ವಿಶಾಲವಾಗಿದ್ದರೂ ನಗರದಿಂದ ಸ್ವಲ್ಪ ದೂರದಲ್ಲಿರುವ ಕಾರಣ ಜನ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಆಯಾ ಬಡಾವಣೆಗಳಿಗೆ ಒಂದರಂತೆ ಉದ್ಯಾನಗಳು ನಿರ್ಮಾಣಗೊಂಡರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

‘ನಗರಸಭೆಗೆ ಸರ್ಕಾರದಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ಅನುದಾನ ಬರುತ್ತದೆ. ಮೇಲಿಂದ ಕೋಟಿಗಟ್ಟಲೆ ತೆರಿಗೆ ಸಂಗ್ರಹವಾಗುತ್ತದೆ. ಪ್ರಾಧಿಕಾರ ಮೀಸಲಿಟ್ಟ ಉದ್ಯಾನದ ಜಾಗಗಳನ್ನು ತನ್ನ ಅಧೀನಕ್ಕೆ ಪಡೆದು, ಆ ಹಣದಿಂದ ಅಭಿವೃದ್ಧಿ ಪಡಿಸಿದರೆ ಸ್ಥಳೀಯರಿಗೆ ಬಹಳ ಅನುಕೂಲವಾಗುತ್ತದೆ’ ಎನ್ನುತ್ತಾರೆ ನಗರದ ನಿವಾಸಿ ರಾಜು.

‘ಪ್ರತಿಯೊಂದು ಬಡಾವಣೆಗಳಲ್ಲಿ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಿದರೆ ಅಲ್ಲಿ ಗಿಡ, ಮರಗಳನ್ನು ನೆಟ್ಟು ಪರಿಸರವನ್ನು ಹಸಿರಾಗಿಸಬಹುದು. ಸುತ್ತಮುತ್ತಲಿನ ಪರಿಸರದಲ್ಲಿ ಉತ್ತಮ ಗಾಳಿ, ವಾತಾವರಣ ಇರುತ್ತದೆ. ಹೀಗಾಗಿ ನಗರಸಭೆ ಇನ್ನಷ್ಟು ವಿಳಂಬ ಮಾಡದೆ ಅವುಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT