ಹೊಸಪೇಟೆ (ವಿಜಯನಗರ): ‘ಏಕಾಗ್ರತೆಯೇ ಉತ್ತಮ ಫಲಿತಾಂಶಕ್ಕೆ ಸಹಕಾರಿ’ ಎಂದು ವಕೀಲೆ ಸವಿತಾ ಹೇಳಿದರು.
ನಗರದ ಥಿಯೊಸಫಿಕಲ್ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಹರೆಯದ ವಯಸ್ಸಿನಲ್ಲಿ ಏಕಾಗ್ರತೆ ಬಹುಮುಖ್ಯ. ಏಕಾಗ್ರತೆಯು ಉತ್ತಮ ಫಲಿತಾಂಶ ನೀಡುವ ಜೊತೆಗೆ ಈ ವಯಸ್ಸಿನಲ್ಲಿ ಬುದ್ಧಿ ಬೆಳವಣಿಗೆಯ ಹಂತವು ಅಧಿಕವಾಗುತ್ತದೆ. ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿದರೆ ಫಲಿತಾಂಶವು ಉತ್ತಮವಾಗಿ ಸಿಗುತ್ತದೆ’ ಎಂದರು.
ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿಯೂ ಆದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ ಮಾತನಾಡಿ, ‘ಪರೀಕ್ಷೆ ಎದುರಿಸಲು ಬೇಕಾಗಿರುವ ಉತ್ತಮ ಅಂಶಗಳನ್ನು ಮತ್ತು ಪರೀಕ್ಷಾ ಮಾರ್ಗದರ್ಶಿ ಸೂತ್ರಗಳನ್ನು ತಜ್ಞರಿಂದ ಪಡೆದುಕೊಂಡು ಉತ್ತಮ ಅಂಕಗಳನ್ನು ಗಳಿಸಿ ಸಾಧಕರಾಗಿ’ ಎಂದು ಹೇಳಿದರು.
ಕಾಲೇಜು ಆಡಳಿತಾಧಿಕಾರಿ ಅರಳಿ ಕೊಟ್ರಪ್ಪ, ಖಜಾಂಚಿ ಪಾಂಡುರಂಗ ಶೆಟ್ಟಿ, ಬಾಷಾ, ಸೈಯದ್ ಮೊಹಮ್ಮದ್, ಪ್ರಾಂಶುಪಾಲ ಜಗದೀಶ ಇದ್ದರು.