ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿರುವುದಕ್ಕೆ ಬೇಸರಗೊಂಡಿರುವ ಮುಖಂಡ ಮೊಹಮ್ಮದ್ ಇಮಾಮ್ ನಿಯಾಜಿ ಅವರ ಬೆಂಬಲಿಗರು ಭಾನುವಾರ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವೆಂಕಟರಾವ ಘೋರ್ಪಡೆ ಅವರಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ ಗುಂಡೂರಾವ ಅವರು ಭಾನುವಾರಿ ‘ಬಿ’ ಫಾರಂ ನೀಡಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಕಚೇರಿ ಎದುರು ನಿಯಾಜಿ ಬೆಂಬಲಿಗರು ಸೇರಿದರು.ಕೆ.ಪಿ.ಸಿ.ಸಿ. ವಿರುದ್ಧ ಧಿಕ್ಕಾರ ಕೂಗಿದರೆ, ನಿಯಾಜಿ ಪರವಾಗಿ ಘೋಷಣೆಗಳನ್ನು ಕೂಗಿ ಸಿಟ್ಟು ಹೊರ ಹಾಕಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಯಾಜಿ, ‘2018ರ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆ ಎಂದು ನೀಡಿರಲಿಲ್ಲ. ಈ ಸಲವೂ ಅದೇ ರೀತಿ ಮಾಡಿದರೆ ತಪ್ಪಾಗುತ್ತದೆ. ಅದರಿಂದ ಸಹಜವಾಗಿಯೇ ನನ್ನ ಬೆಂಬಲಿಗರಿಗೆ ನೋವಾಗಿದೆ’ ಎಂದು ಹೇಳಿದರು.
‘ಸೋಮವಾರ ಬೆಳಗಿನ ವರೆಗೆ ಪಕ್ಷದ ವರಿಷ್ಠರ ನಿರ್ಧಾರ ಕಾದು ನೋಡುತ್ತೇನೆ. ಬಳಿಕ ಸಮಾಜದ ಹಿರಿಯ ಮುಖಂಡರು, ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ಚುನಾವಣೆಯಲ್ಲಿ ಕಣಕ್ಕಿಳಿಯಬೇಕೋ ಅಥವಾ ಇಲ್ಲವೋ ಎನ್ನುವುದನ್ನು ತೀರ್ಮಾನಿಸುತ್ತೇನೆ’ ಎಂದು ತಿಳಿಸಿದರು.