ಬಳ್ಳಾರಿ: ಹೈದರಾಬಾದ್– ಕರ್ನಾಟಕ ಭಾಗದ 14 ಅಭ್ಯರ್ಥಿಗಳು ವೈರ್ಲೆಸ್ ವಿಭಾಗದ ಕಾನ್ಸ್ಟೆಬಲ್ಗಳಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಂಡು 11 ತಿಂಗಳು ಕಳೆದರೂ ನೇಮಕಾತಿ ಆದೇಶಪತ್ರ ದೊರಕದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಇವರೊಂದಿಗೇ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದ ಹೈ–ಕ ಹೊರಗಿನ ಭಾಗಗಳ ಅಭ್ಯರ್ಥಿಗಳು ಈಗಾಗಲೇ ಠಾಣೆಗಳಲ್ಲಿ ಕೆಲಸ ಮಾಡು ತ್ತಿದ್ದಾರೆ. ಈ ತಾರತಮ್ಯ ಏಕೆ ಎಂಬ ಪ್ರಶ್ನೆ ಈಗ ಕೇಳಿಬರುತ್ತಿದೆ.
ನೇಮಕಾತಿ ಪತ್ರ ಏಕೆ ನೀಡಿಲ್ಲ ಎಂಬ ಕಾರಣವನ್ನೂ ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿ ಕಚೇರಿ ನೀಡದೇ ಇರು ವುದು ಅಭ್ಯರ್ಥಿಗಳ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ನೇಮಕವಾಗಿರುವ ಕುರಿತು ಹಿಂದಿನ ವರ್ಷದ ಡಿ.8ರಂದು ಎಡಿಜಿಪಿ ಕಚೇರಿಯಿಂದ ಈ ಅಭ್ಯರ್ಥಿಗಳಿಗೆ ಪತ್ರ ಬಂದಿದೆ. ಆದರೆ ಅವರನ್ನು ಕರ್ತವ್ಯಕ್ಕೆ ನಿಯೋಜಿಸುವ ಆದೇಶಪತ್ರ ಬಾರದೆ ಎಲ್ಲಿಗೂ ಹೋಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಎಡಿಜಿಪಿ ಕಚೇರಿಗೆ ಜುಲೈನಲ್ಲಿ ಸಲ್ಲಿಸಿದ ಮನವಿಪತ್ರಕ್ಕೆ ಯಾವುದೇ ಸ್ಪಂದನೆ ದೊರಕಿಲ್ಲ. ಅಭ್ಯರ್ಥಿಗಳು ಹತ್ತಾರು ಬಾರಿ ಕಚೇರಿಗೆ ಭೇಟಿ ನೀಡಿದರೂ ಪ್ರಯೋಜನವಾಗಿಲ್ಲ.
‘ಆಯ್ಕೆ ಪಟ್ಟಿಯಲ್ಲಿ ಇದ್ದ ಎಲ್ಲ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಮತ್ತು ಮೂಲ ದಾಖಲಾತಿಗಳ ಪರಿಶೀಲನೆಯೂ ಮುಗಿದಿದೆ. ಆದರೆ ನೇಮಕಾತಿ ಪತ್ರವನ್ನು ಏಕೆ ನಮಗೆ ನೀಡುತ್ತಿಲ್ಲ ಎಂಬುದು ಗೊತ್ತಿಲ್ಲ’ ಎಂದು ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.
‘ಎಡಿಜಿಪಿ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿದರೆ ಮಾಹಿತಿ ನೀಡುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.