ಬಳ್ಳಾರಿ: ಅಗತ್ಯ ವಸ್ತುಗಳ ಖರೀದಿಗೆ ಅತ್ಯಂತ ಅವಶ್ಯಕತೆ ಇದ್ದರೇ ಬೆಳಗ್ಗೆ 7ರಿಂದ 11ರವರೆಗೆ ಮಾತ್ರ ಹೊರಬಂದು ಖರೀದಿಸಿ; ಇಲ್ಲದಿದ್ದರೆ ಮನೆಯಲ್ಲಿಯೇ ಕ್ಷೇಮವಾಗಿರಿ. ಆಕಸ್ಮಾತ್ ಹೊರಬಂದರೇ ಪೊಲೀಸರ ಲಾಠಿರುಚಿ ಖಚಿತ!
ಇದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ. ಈ ಮುಂಚೆ ಸಂಜೆ 5ರಿಂದ 7ರವರೆಗೆ ಖರೀದಿಗೆ ನೀಡಲಾಗಿದ್ದ ಆದೇಶವನ್ನು ರದ್ದುಪಡಿಸಿದ್ದು, ಬೆಳಗ್ಗೆಯಷ್ಟೇ ಖರೀದಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ಹಿಂದೆ ಮೂರು ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತ ಕ್ರಮವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಮಯವನ್ನು ಮರು ನಿಗದಿಪಡಿಸುವ ಅವಶ್ಯಕತೆ ಕಂಡುಬಂದಿರುವುದರಿಂದ ಮತ್ತು ಸರ್ಕಾರದ ಆದೇಶದಂತೆ ಅಗತ್ಯ
ವಸ್ತುಗಳಾದ ತರಕಾರಿ, ಹಣ್ಣು, ದಿನಸಿ ವಸ್ತುಗಳು, ಮಾಂಸ, ಮೀನು ಇವುಗಳನ್ನು ಮರುನಿಗದಿಪಡಿಸಿದ ಸಮಯದಲ್ಲಿ ಮಾತ್ರ ಖರೀದಿ ವ್ಯವಹಾರ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.
ಈ ಆದೇಶವು ಏ.2ರಿಂದ ಜಾರಿಯಲ್ಲಿರುತ್ತದೆ. ವಾಹನಗಳಿಗೆ ನೀಡಲಾದ ವಿನಾಯಿತಿಗಳನ್ನು ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.