ಹೊಸಪೇಟೆ: ಕೊರೊನಾದಿಂದ ಸೃಷ್ಟಿಯಾಗಿರುವ ಪ್ರತಿಕೂಲ ಸನ್ನಿವೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದ್ದು, ಅದನ್ನು ತಡೆಯಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಶೇಕ್ ತನ್ವೀರ್ ಆಸಿಫ್ ಅವರಿಗೆ ಸಲ್ಲಿಸಿದರು.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಹೆಚ್ಚಿನ ಪೊಲೀಸ್ ಠಾಣೆಗಳು ಲಾಕ್ಡೌನ್ ಆಗಿವೆ. ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರ ದೂರು ಪಡೆಯಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಬಾಲ್ಯ ವಿವಾಹ ತಡೆಯಬೇಕು. ಅಂತರ್ಜಾತಿ ವಿವಾಹ ಮಾಡಿಕೊಂಡವರ ಹತ್ಯೆಗಳು ನಡೆಯುತ್ತಿದ್ದು, ಅವರಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಮನೆ ಕೆಲಸ ಮಾಡುವವರು, ಬೀದಿಬದಿ ವ್ಯಾಪಾರಿಗಳು, ಗೃಹಾಧಾರಿತ ಚಟುವಟಿಕೆಗಳು ನಿಂತಿರುವುದರಿಂದ ಅನೇಕ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟಲಾಗುತ್ತಿಲ್ಲ. ಮನೆ ನಡೆಸಲು ಆಗುತ್ತಿಲ್ಲ. ಸರ್ಕಾರ ಮುಂದಿನ ಆರು ತಿಂಗಳ ವರೆಗೆ ಎಲ್ಲ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾಸಿಕ ₹7,500 ಪರಿಹಾರ ಧನ ಕೊಡಬೇಕು. ಸ್ವಸಹಾಯ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ, ಮುಖಂಡರಾದ ಎಂ.ಜಂಬಯ್ಯ ನಾಯ್ಕ, ಕೆ.ನಾಗರತ್ನಮ್ಮ, ಎ.ಕರುಣಾನಿಧಿ, ಗೋಪಾಲ್, ಎನ್.ಯಲ್ಲಾಲಿಂಗ, ಶಕುಂತಲ, ಕೆ.ಎಂ.ಸ್ವಪ್ನ, ವಿ.ಸ್ವಾಮಿ ಇದ್ದರು.