ಬೆಂಗಳೂರು: ರಾಜ್ಯದಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿ ಆಗುತ್ತಿದ್ದು, ಇನ್ನೂ ಮೂರು ದಿನಗಳು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ರಾಜ್ಯದ ಪಶ್ಚಿಮ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದರು.
ಸೋಮವಾರ ದಕ್ಷಿಣ ಒಳನಾಡು ಪ್ರದೇಶಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಮಳೆಯಾಗಿದೆ. ಭಾನುವಾರ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಭಾರಿ ಮಳೆ ಸುರಿದಿದೆ ಎಂದು ವಿವರಿಸಿದರು.
ವಾಯುಭಾರ ಕುಸಿತ ದೇಶದ ಕೇಂದ್ರ ಭಾಗಗಳಿಂದ ದಕ್ಷಿಣ ಕೊಂಕಣ ಪ್ರದೇಶಗಳತ್ತ ಚಲಿಸುತ್ತಿದೆ. ಪೂರ್ವದಿಂದ ಜೋರಾದ ಗಾಳಿ ಬೀಸುತ್ತಿದ್ದು, ತಮಿಳುನಾಡು, ಕರ್ನಾಟಕ, ಕೇರಳದಲ್ಲಿ ವರ್ಷಧಾರೆಯಾಗುತ್ತಿದೆ. ಕನಿಷ್ಠ ತಾಪಮಾನದಲ್ಲೂ ಇಳಿಕೆಯಾಗಲಿದೆ ಎಂದು ಹೇಳಿದರು.