ಹೊಸಪೇಟೆ: ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಣ ಸಚಿವರ ಖಾತೆಯನ್ನು ಸೂಕ್ತರಾದವರಿಗೆ ಶೀಘ್ರ ವಹಿಸಬೇಕೆಂದು ಆಗ್ರಹಿಸಿ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಕಾರ್ಯಕರ್ತರು ಗುರುವಾರ ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಉಪ ತಹಶೀಲ್ದಾರ್ ರಮೇಶ್ ನಾಯ್ಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಶಿಕ್ಷಣ ಸಚಿವರಿಲ್ಲದ ಕಾರಣ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಮೇಲಿಂದ ಮೇಲೆ ರಾಜ್ಯದ ಹಲವು ಕಡೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ವರದಿಯಾಗುತ್ತಿವೆ. ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಮೂರು ತಿಂಗಳಿಂದ ನಿರ್ದೇಶಕರ ಹುದ್ದೆ ಖಾಲಿ ಇದೆ. ಸರ್ಕಾರ ಶಿಕ್ಷಣ ಇಲಾಖೆಯನ್ನು ಈ ರೀತಿ ಕಡೆಗಣಿಸುತ್ತಿರುವುದು ಸರಿಯಲ್ಲ’ ಎಂದು ಸಂಘಟನೆಯ ಮುಖಂಡ ಅಲ್ತಾಫ್ ಹೇಳಿದರು.
‘ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಿಲ್ಲ. ಅನೇಕ ಶಾಲಾ–ಕಾಲೇಜುಗಳಲ್ಲಿ ಬೋಧಕ–ಬೋಧಕೇತರ ಸಿಬ್ಬಂದಿ ಹುದ್ದೆ ಖಾಲಿ ಉಳಿದಿವೆ. ಶಿಕ್ಷಣ ಸಚಿವರನ್ನು ನೇಮಿಸಿದರೆ ಎಲ್ಲ ಸಮಸ್ಯೆ ಬಗೆಹರಿಯಬಹುದು’ ಎಂದು ತಿಳಿಸಿದರು.
ಸಂಘಟನೆಯ ಮೊಹಮ್ಮದ್ ಗೌಸ್, ಮಲಿಕ್, ಶೋಯೆಬ್, ಮೊಯಿನ್, ವಾಜೀದ್, ಸೊಹೆಲ್, ಬಾಷಾ ಗಂಗಾವತಿ, ಹಮೀದ್ ಇದ್ದರು.