ಹೊಸಪೇಟೆ: ‘ಆಯೇಷಾ ಮದರ್ ಆಫ್ ಬಿಲೀವರ್ಸ್‘ ಸಿನಿಮಾ ಟ್ರೇಲರ್ ಮೇಲೆ ತಕ್ಷಣವೇ ನಿಷೇಧ ಹೇರಬೇಕೆಂದು ಆಗ್ರಹಿಸಿ ‘ಮಜ್ಲೀಸ್–ಎ–ಟಿಪ್ಪು ಸುಲ್ತಾನ್ ಕರ್ನಾಟಕ’ ಸಂಘಟನೆಯ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಷಿಯಾ ವಕ್ಫ್ ಮಂಡಳಿ ಅಧ್ಯಕ್ಷ ಸೈಯದ್ ವಸೀಂ ರಿಜ್ವಿ ಮಾಡಿರುವ ಈ ಸಿನಿಮಾದಲ್ಲಿ ಸುನ್ನಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳಿವೆ. ಹಜರತ್ ಮೊಹಮ್ಮದ್ ಮುಸ್ತಫ ಅವರ ಪತ್ನಿ ಆಯೇಷಾ ಸಿದ್ದಿಕಿ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಹಾಗಾಗಿ ಇದರ ಟ್ರೇಲರ್ ಮೇಲೆ ನಿಷೇಧ ಹೇರಬೇಕು. ಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಬಾರದು’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಒಂದುವೇಳೆ ಈ ಚಿತ್ರ ಪ್ರದರ್ಶನ ಕಂಡರೆ ದೇಶದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಡಬಹುದು. ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಬಹುದು. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಸಂಘಟನೆಯ ಜಿಲ್ಲಾ ಸಂಚಾಲಕ ಕೆ. ಇರ್ಫಾನ್, ಮೊಹಮ್ಮದ್ ರಶೀದ್, ರಸೂಲ್, ಫರ್ಹಾನ್, ಅಬ್ದುಲ್ ಇದ್ದರು.