ಹೊಸಪೇಟೆ: ನಗರ ಹಾಗೂ ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ವಿಶ್ವ ಕಾರ್ಮಿಕ ದಿನ ಆಚರಿಸಲಾಯಿತು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ನಿಂದ ನಗರದ ಶ್ರಮಿಕ ಭವನದ ಬಳಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾರ್ಮಿಕ ಮುಖಂಡ ಎಂ. ಗೋಪಾಲಯ್ಯನವರು ಧ್ವಜಾರೋಹಣ ಮಾಡಿದರು. ಬಳಿಕ ಎಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಯೂನಿಯನ್ ತಾಲ್ಲೂಕು ಘಟಕದ ಅಧ್ಯಕ್ಷ ಎ. ಕರುಣಾನಿಧಿ ಮಾತನಾಡಿ, ‘ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತಂದು, ಬಂಡವಾಳಷಾಹಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. 44 ಕಾನೂನುಗಳನ್ನು ನಾಲ್ಕು ಕೋಡ್ಗಳಾಗಿ ಬದಲಿಸಲಾಗುತ್ತಿದೆ. ಇದು ಕಾರ್ಮಿಕ ವಿರೋಧಿ ನೀತಿ. ಈ ವಿಚಾರವನ್ನು ಸರ್ಕಾರ ಮನಸ್ಸಿನಿಂದ ತೆಗೆದು ಹಾಕಬೇಕು. ₹18 ಸಾವಿರ ಕನಿಷ್ಠ ಕೂಲಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
‘ಮೋದಿ ಸರ್ಕಾರ ಅಧಿಕಾಕ್ಕೆ ಬಂದ ದಿನದಿಂದಲೂ ಬಂಡವಾಳಷಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಿದೆ’ ಎಂದು ಆಕ್ರೋಷ ಹೊರ ಹಾಕಿದರು. ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಕೇಂದ್ರ ಕಡಿತಗೊಳಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿ ಕಾರ್ಮಿಕ ದಿನ ಆಚರಿಸಿದರು.
ಜಿಲ್ಲಾಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಚ್.ಹುಲುಗಪ್ಪ ಕೊಟಗಿನಾಳ್, ಅಸಂಘಟಿತರ ಕಾರ್ಮಿಕರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸೋಮಪ್ಪ, ಮುಖಂಡರಾದ ದೇವರಮನೆ ಕನ್ನೇಶ್ವರ,ಟಿ.ಚಾಂದಬಾಷ, ಕಿಶೋರ ಕುಮಾರ, ಎನ್.ಬಸಪ್ಪ ಇದ್ದರು.