ಹೊಸಪೇಟೆ: ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಇತ್ತೀಚೆಗೆ ಕೊಲೆಯಾಗಿರುವ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಆಗ್ರಹಿಸಿದೆ.
ವಿಭಾಗದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
‘ಅಕ್ರಮ ಮರಳು ದಂದೆ ತಡೆಯಲು ಹೋಗಿದ್ದ ಪಾಟೀಲ ಅವರ ಮೇಲೆ ಲಾರಿ ಹರಿಸಿ ಇತ್ತೀಚೆಗೆ ಕೊಲೆ ಮಾಡಲಾಗಿದೆ. ಕೂಡಲೇ ಅವರ ಕುಟುಂಬಕ್ಕೆ ಪರಿಹಾರ ಧನ ಕೊಡಬೇಕು. ಅವರ ಮಕ್ಕಳದ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ಆಗ್ರಹಿಸಿದರು.
‘ಘಟನೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು. ಕಾವಲಿಗೆ ಅಗತ್ಯ ಸಿಬ್ಬಂದಿ ನೇಮಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.
ಸಮಿತಿಯ ಅಧ್ಯಕ್ಷ ದೇವರಮನೆ ಕನ್ನೇಶ್ವರ, ಉಪಾಧ್ಯಕ್ಷ ತುಕಾರಾಂ, ಪ್ರಧಾನ ಕಾರ್ಯದರ್ಶಿ ವೈ. ಸೂರ್ಯನಾರಾಯಣ, ಸದಸ್ಯರಾದ ಷಾಷಾವಲಿ, ಬಸಪ್ಪ, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಆರ್. ಮಳಲಿ ಮನವಿಗೆ ಸಹಿ ಹಾಕಿದ್ದಾರೆ.