ಹೊಸಪೇಟೆ: ‘ನಗರದಿಂದ ಬೆಂಗಳೂರಿಗೆ ಇಂಟರ್ಸಿಟಿ ರೈಲು ಓಡಿಸಬೇಕು. ಇದು ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದು, ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು‘ ಎಂದು ದಕ್ಷಿಣ ನೈರುತ್ಯ ರೈಲ್ವೆಯ ಸದಸ್ಯ ಬಾಬುಲಾಲ್ ಜಿ. ಜೈನ್ ಆಗ್ರಹಿಸಿದ್ದಾರೆ.
ಭಾನುವಾರ ಈ ಸಂಬಂಧ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಕೊಟ್ಟೂರು–ಹೊಸಪೇಟೆ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಿಸಬೇಕು. ಇದರಿಂದ ಬೆಂಗಳೂರಿನ ಪಯಣದ ಅವಧಿ ಬಹಳಷ್ಟು ಕಡಿಮೆಯಾಗಿ, ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಹೊಸಪೇಟೆ–ಬೆಂಗಳೂರು ಪ್ಯಾಸೆಂಜರ್ ರೈಲಿನ ಸೇವೆ ಕೊಪ್ಪಳದ ವರೆಗೆ ವಿಸ್ತರಿಸಬೇಕು’ ಎಂದು ಕೇಳಿದ್ದಾರೆ.
‘ಚೆನ್ನೈ–ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ನಿತ್ಯ ಓಡಿಸಬೇಕು. ಅದೇ ವಾಸ್ಕೊ–ಹೌರಾ ರೈಲು ಕೂಡ ದಿನನಿತ್ಯ ಓಡಿಸಲು ಕ್ರಮ ಜರುಗಿಸಬೇಕು. ಅಲ್ಲದೇ ಹೆಚ್ಚುವರಿ ಬೋಗಿಗಳನ್ನು ಅಳವಡಿಸಬೇಕು. ಹೀಗೆ ಮಾಡಿದರೆ ಈ ಭಾಗದ ನೂರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ನಗರದ ಅನಂತಶಯನಗುಡಿ ಬಳಿ ಮೇಲ್ಸೇತುವೆ ನಿರ್ಮಿಸಬೇಕು’ ಎಂದು ಆಗ್ರಹಿಸಿದ್ದಾರೆ.