ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಎಚ್. ಗಂಗಮ್ಮ ಅನಿರೀಕ್ಷಿತವಾಗಿ ದೇವದಾಸಿ ಪದ್ಧತಿಯ ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿದ್ದರು. ಅವರ ಅರಿವಿಗೆ ಬರುತ್ತಿದ್ದಂತೆ ಅದಕ್ಕೆ ತಿಲಾಂಜಲಿ ಹಾಡಿದರು. ಅದಾಗಲೇ ಅವರಿಗೆ ಇಬ್ಬರು ಗಂಡು, ಒಬ್ಬ ಹೆಣ್ಣು ಮಗಳು ಜನಿಸಿದ್ದರು. ಹೆರಿಗೆ ವೇಳೆ ಮಗಳು ಮೃತಪಟ್ಟಳು. ನಂತರ ಮಗ ವಿರೂಪಣ್ಣ ಸಿಡಿಲಿಗೆ ಬಲಿಯಾದರು. ಉಳಿದ ಒಬ್ಬ ಮಗ ಎಚ್. ರೇಣುಕಪ್ಪ ಅವರನ್ನು ಜತನದಿಂದ ಆರೈಕೆ ಮಾಡಿ ಶಾಲೆಗೆ ಕಳಿಸಿದರು.ಹೀಗೆ ಸಂಕಷ್ಟದ ಜೀವನ ನಡೆಸುತ್ತಿದ್ದಾಗ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ 1982ರಲ್ಲಿ ಸರ್ಕಾರ ಸಮೀಕ್ಷೆ ನಡೆಸಿ ಅದರಲ್ಲಿ ಗಂಗಮ್ಮ ಅವರನ್ನು ಗುರುತಿಸಿತು.