ಹೊಸಪೇಟೆ(ವಿಜಯನಗರ): ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸು ಅವರ 39ನೇ ಪುಣ್ಯಸ್ಮರಣೆ ನಗರದ ಹಿಂದುಳಿದ ವರ್ಗಗಳ ಒಕ್ಕೂಟದ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು.
ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್, ‘1972ರಿಂದ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಅರಸು ಅವರು ಹಿಂದುಳಿದ ವರ್ಗಗಳಲ್ಲಿ ಆತ್ಮ ಗೌರವ, ಸ್ವಾಭಿಮಾನ ಮತ್ತು ರಾಜಕೀಯ ಶಕ್ತಿ ತುಂಬಿದರು. ಹಿಂದುಳಿದ ವರ್ಗಗಳಿಗೆ ರಾಜ್ಯದಲ್ಲಿ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಜಾರಿಗೊಳಿಸಿ, ದೊಡ್ಡ ಬದಲಾವಣೆಗೆ ನಾಂದಿ ಹಾಡಿದರು’ ಎಂದರು.
‘ಉತ್ತಮ ರಾಜನೀತಿಜ್ಞ, ಜನಪರ ಆಡಳಿತಗಾರನೊಬ್ಬ ಅಂಧಕಾರದ ಯುಗವನ್ನು ಬೆಳಕಿನ ಯುಗವಾಗಿ ಪರಿವರ್ತಿಸಿದ್ದರು. ಅವರ ಪುಣ್ಯಸ್ಮರಣೆಯ ದಿನದಂದು ಅವರನ್ನು ನೆನಪಿಸಿಕೊಂಡು ಗೌರವ ಸೂಚಿಸುವುದು ಶೋಷಿತ ಸಮುದಾಯಗಳ ಕರ್ತವ್ಯವಾಗಿದೆ’ ಎಂದರು.