ಹೊಸಪೇಟೆ(ವಿಜಯನಗರ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಏಳಿಗೆಗಾಗಿ ಮೀಸಲಿರಿಸಿರುವ ₹26 ಸಾವಿರ ಕೋಟಿಯ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ದಲಿತ ಹಕ್ಕುಗಳ ಸಮಿತಿ ಆಗ್ರಹಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೆಸರಿಗೆ ಬರೆದ ಮನವಿ ಪತ್ರವನ್ನು ಮಂಗಳವಾರ ನಗರದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿ, ಒತ್ತಾಯಿಸಿದರು.
ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಂಬಯ್ಯ ನಾಯಕ ಮಾತನಾಡಿ, ‘ಪರಿಶಿಷ್ಠ ವರ್ಗಗಳ ಏಳಿಗೆಗೆ ₹26,005 ಕೋಟಿ ಅನುದಾನದ ಕ್ರಿ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆ ಅಂತಿಮಗೊಳಿಸಿದೆ. ಕೂಡಲೇ ರಾಜ್ಯ ಪರಿಷತ್ ಸಭೆ ನಡೆಸಿ, ಅಂತಿಮ ಅನುಮೋದನೆಗೆ ಮುಖ್ಯಮಂತ್ರಿ ಆದೇಶ ನೀಡಬೇಕು’ ಎಂದು ಆಗ್ರಹಿಸಿದರು.
‘ಕೋವಿಡ್–19ನಿಂದ ತಳ ಸಮುದಾಯಗಳು ಸಂಕಷ್ಟಕ್ಕೆ ಒಳಗಾಗಿವೆ. ಕೂಡಲೆ ಪ್ರತಿ ಕುಟುಂಬಕ್ಕೆ ₹10 ಸಾವಿರ ಪರಿಹಾರ ಧನ ಘೋಷಿಸಬೇಕು. ಹಾಸ್ಟೆಲ್ಗಳಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಲಾಕ್ಡೌನ್ ಕಾರಣ ಕೆಲವರು ಕೂಲಿ ಕೆಲಸ ಮಾಡುತ್ತಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕೊಡುತ್ತಿದ್ದ ಆಹಾರ ಭತ್ಯೆ ₹3 ಸಾವಿರ ಕೊಡಬೇಕು. ಅರಣ್ಯ ಭೂಮಿ ವ್ಯವಸಾಯ ಮಾಡುವ ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಪಟ್ಟಾ ನೀಡಬೇಕು’ ಎಂದು ಒತ್ತಾಯಿಸಿದರು.
ದಲಿತ ಹಕ್ಕುಗಳ ಸಮಿತಿಯ ತಾಲ್ಲೂಕು ಸಂಚಾಲಕ ಎಸ್.ಸತ್ಯಮೂರ್ತಿ, ಜಿಲ್ಲಾ ಮುಖಂಡರಾದ ಬಿ.ತಾಯಪ್ಪ ನಾಯಕ, ಬಿ.ರಮೇಶ ಕುಮಾರ, ಡಿ.ಭರಮಪ್ಪ, ಮಲ್ಲೇಶ, ಡಿ.ಕೃಷ್ಣಪ್ಪ, ಶಿವರಾಮಪ್ಪ ಇದ್ದರು.