ಹೊಸಪೇಟೆ: ಅಂಗವಿಕಲರಿಗೆ ಆರ್ಥಿಕ ಪುನಶ್ಚೇತನ ಯೋಜನೆ ರೂಪಿಸುವಂತೆ ಆಗ್ರಹಿಸಿ ‘ತಾಲ್ಲೂಕು ವಿಕಲಚೇತನರ ಸಂಘ’ದವರು ಗುರುವಾರ ತಾಲ್ಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ‘ಅಂಗವಿಕಲರಿಗೆ ಮೀಸಲಿಟ್ಟಿರುವ ಶೇ 5ರಷ್ಟು ಅನುದಾನವನ್ನು ಅವರ ಕಲ್ಯಾಣಕ್ಕೆ ಬಳಸಬೇಕು. ಆದಷ್ಟು ಶೀಘ್ರ ಸಭೆ ಕರೆದು, ಅಂಗವಿಕಲರೊಂದಿಗೆ ಚರ್ಚಿಸಿ ಆ ಅನುದಾನ ಖರ್ಚು ಮಾಡಬೇಕು’ ಎಂದು ಒತ್ತಾಯಿಸಿದರು.
‘ಲಾಕ್ಡೌನ್ ನಂತರ ಅಂಗವಿಕಲರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಮೀಸಲಿಟ್ಟಿರುವ ಹಣ ಬಳಸದೇ ಇರುವುದರಿಂದ ಮತ್ತಷ್ಟು ತೊಂದರೆಗೆ ಈಡಾಗಿದ್ದಾರೆ. ಜೀವನ ನಡೆಸುವುದು ದುಸ್ತರವಾಗಿದೆ. ಹಾಗಾಗಿ ಏಳು ದಿನಗಳ ಒಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಕೆ.ಹುಲುಗಪ್ಪ, ಮುಖಂಡರಾದ ಪಿ.ಸಿ.ಶಾಂತ, ಶೇಕ್ ಮೆಹಬೂಬ್ ಬಾಷ, ಹುಲಿಗೆಮ್ಮ, ದೇವರಾಜ್, ರಮೇಶ್ ಇದ್ದರು.