ಹೊಸಪೇಟೆ(ವಿಜಯನಗರ): ರಾಜ್ಯ ಸರ್ಕಾರ ಹೆಚ್ಚಿಸಿರುವ ವಿದ್ಯುತ್ ದರ ಏರಿಕೆ ಆದೇಶ ಹಿಂಪಡೆದು, ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟದ (ಡಿವೈಎಫ್ಐ) ಕಾರ್ಯಕರ್ತರು ಸೋಮವಾರ ನಗರದ ಜೆಸ್ಕಾಂ ಕಚೇರಿ ಎದುರು ಪ್ರತಿಭಟvijayaನೆ ನಡೆಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ಜೆಸ್ಕಾಂ ಇಒ ಶ್ರೀನಿವಾಸ್ ಹಾಗೂ ಎಇಇ ಪ್ರವೀಣ್ ಅವರಿಗೆ ಸಲ್ಲಿಸಿದರು.
‘ಕೋವಿಡ್ನಿಂದ ಜನ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿದ್ಯುತ್ ದರ ಹೆಚ್ಚಿಸಿರುವುದು ಎಷ್ಟು ಸರಿ. ಕೂಡಲೇ ಹೆಚ್ಚಿಸಿರುವ ದರ ಹಿಂಪಡೆಯಬೇಕು. ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
‘ಕಷ್ಟಕಾಲದಲ್ಲಿ ವಿದ್ಯುತ್, ಕುಡಿಯುವ ನೀರು, ಆಸ್ತಿ ತೆರಿಗೆಯನ್ನು ಸರ್ಕಾರವೇ ಮನ್ನಾ ಮಾಡಿ ಜನರ ನೆರವಿಗೆ ಧಾವಿಸಬೇಕಿತ್ತು. ಆದರೆ, ಅದನ್ನು ಹೆಚ್ಚಿಸಿ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕಿರುವುದು ಎಷ್ಟು ಸರಿ. ಜನವಿರೋಧಿ ಸರ್ಕಾರದಿಂದ ಇಂತಹ ಕೆಲಸ ಮಾಡಲು ಸಾಧ್ಯ’ ಎಂದು ಟೀಕಿಸಿದರು.
ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್, ಜಿಲ್ಲಾ ಅಧ್ಯಕ್ಷ ವಿ.ಸ್ವಾಮಿ, ತಾಲ್ಲೂಕು ಅಧ್ಯಕ್ಷ ಕಲ್ಯಾಣಯ್ಯ, ಈ.ಮಂಜುನಾಥ, ಕಿನ್ನಾಳ್ ಹನುಮಂತ, ಬಂಡೆ ತಿರುಕಪ್ಪ, ಅಲ್ತಾಫ್, ಪವನ್ಕುಮಾರ್ ಇದ್ದರು.