ಹೊಸಪೇಟೆ: ‘ಆರ್ಥಿಕ ಸಾಕ್ಷರತೆಯಿಂದ ಆರ್ಥಿಕವಾಗಿ ಭದ್ರರಾಗಬಹುದು. ಅನೇಕ ಜನರಿಗೆ ಹಣವನ್ನು ಯಾವ ರೀತಿ ಬಳಸಬೇಕು ಎಂಬುದರ ಜ್ಞಾನ ಇರುವುದಿಲ್ಲ. ಹೀಗಾಗಿ ಅವರು ಅಭದ್ರತೆಯಲ್ಲಿ ಇರುತ್ತಾರೆ’ ಎಂದು ಸಾಕ್ಷರತಾ ಕೇಂದ್ರ ಘಟಕದ ಜಿಲ್ಲಾ ಸಂಯೋಜಕ ಸಿ. ನಾಗರಾಜ ತಿಳಿಸಿದರು.
ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಸಂಘಟಿತ ವಲಯದಲ್ಲಿ ದುಡಿಯುವವರಿಗೆ ಪಿಂಚಣಿ ಇರುವುದಿಲ್ಲ. ಮಕ್ಕಳ ಭವಿಷ್ಯ, ಜೀವನದ ಭದ್ರತೆಗೆ ಅವರು ಸರ್ಕಾರಿ ಬ್ಯಾಂಕುಗಳಲ್ಲಿ ಹಣ ಉಳಿತಾಯ ಮಾಡಬೇಕು’ ಎಂದು ಹೇಳಿದರು.
ಉಳಿತಾಯ ಖಾತೆಯ ಬಗೆ, ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು, ಯಾರೆಲ್ಲ ಬ್ಯಾಂಕ್ ಖಾತೆ ತೆರೆಯಬಹುದು ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.
ಮರಿಯಮ್ಮನಹಳ್ಳಿ ಬ್ಯಾಂಕ್ ಆಫ್ ಇಂಡಿಯಾ ಶಾಖೆ ವ್ಯವಸ್ಥಾಪಕ ರಾಘವೇಂದ್ರ, ಬ್ಯಾಂಕ್ ಮಿತ್ರ ಪರಮೇಶ್, ಡಣಾಯಕನಕೆರೆ ಗ್ರಾಮ ಪಂಚಾಯಿತಿ ಸದಸ್ಯ ಸೋಮಪ್ಪ, ಎ. ರಂಗಮ್ಮ ಇದ್ದರು.