ಹೊಸಪೇಟೆ: ‘ಶಿಕ್ಷಣ ಸಂಸ್ಥೆಗಳು ಹಾಗೂ ಉದ್ದಿಮೆಗಳ ನಡುವೆ ಹೆಚ್ಚಿನ ಸಹಭಾಗಿತ್ವ ಬೆಳೆಯಬೇಕು. ಹೀಗಾದಾಗ ಉದ್ಯಮಕ್ಕೆ ಬೇಕಿರುವ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಬಹುದು’ ಎಂದು ಜೆಎಸ್ಡಬ್ಲ್ಯೂ ಸಹ ಉಪಾಧ್ಯಕ್ಷ ಎಂ. ತ್ರಿನಾದ್ ಹೇಳಿದರು.
ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಬುಧವಾರ ಎಂಬಿಎ ನೂತನ ಬ್ಯಾಚ್ ಆರಂಭದ ಪ್ರಯುಕ್ತ ಹಮ್ಮಿಕೊಂಡಿದ್ದ ‘ಶುಭಾಕಾಂಕ್ಷ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಎಂಬಿಎ ವಿದ್ಯಾರ್ಥಿಗಳಿಗೆ ಉದ್ಯಮ ಕ್ಷೇತ್ರದಲ್ಲಿನ ಕೌಶಲ ಅತ್ಯಗತ್ಯ. ಈ ನಿಟ್ಟಿನಲ್ಲಿ ಉದ್ಯಮ ಹಾಗೂ ಶೈಕ್ಷಣಿಕ ಅಂತರವನ್ನು ಪೂರೈಸಲು ದೀರ್ಘಕಾಲಿಕ ಸಹಭಾಗಿತ್ವ ವಿದ್ಯಾರ್ಥಿಗಳ ಕೌಶಲದ ಅಭಿವೃದ್ಧಿಗೆ ಮುಖ್ಯಪಾತ್ರ ವಹಿಸುತ್ತದೆ. ಇದರ ಅಡಿಯಲ್ಲಿ ನಿರಂತರ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಸೂಕ್ತ ವಿದ್ಯಾರ್ಥಿಗಳನ್ನು ಉದ್ಯೋಗ ಸಂದರ್ಶನದ ಆಯ್ಕೆ ಮಾಡಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ, ಪ್ರಾಚಾರ್ಯ ಎಸ್.ಎಂ. ಶಶಿಧರ್, ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ.ರವಿಕುಮಾರ್ ಇದ್ದರು.