ಹೊಸಪೇಟೆ (ವಿಜಯನಗರ): ಎರಡು ವರ್ಷಗಳ ನಂತರ ಈದ್–ಉಲ್–ಫಿತ್ರ್ ಹಬ್ಬವನ್ನು ಮಂಗಳವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಕೋವಿಡ್ನಿಂದ ಈ ಹಿಂದಿನ ಎರಡು ವರ್ಷ ಮುಸ್ಲಿಮರು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ, ಹಬ್ಬವನ್ನು ಸರಳವಾಗಿ ಆಚರಿಸಿದ್ದರು. ಆದರೆ, ಈಗ ಕೋವಿಡ್ ಕಾರ್ಮೋಡ್ ಸರಿದಿರುವುದರಿಂದ ಎಲ್ಲರೂ ಈದ್ಗಾ ಮೈದಾನಗಳಿಗೆ ತೆರಳಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಆಲಿಂಗನ ಮಾಡಿಕೊಂಡು ಶುಭ ಕೋರಿದರು.
ಹೊಸ ಬಟ್ಟೆ, ತಲೆ ಮೇಲೆ ಟೋಪಿ ಧರಿಸಿಕೊಂಡು, ಸುಗಂಧ ದ್ರವ್ಯ ಹಚ್ಚಿಕೊಂಡು, ಅಲ್ಲಾಹುವಿನ ಸ್ಮರಣೆ ಮಾಡುತ್ತ ವಿವಿಧ ಕಡೆಗಳಿಂದ ಬಂದಿದ್ದ ಮುಸ್ಲಿಮರು ನಗರದ ಜಬ್ಬಲ್ ಸರ್ಕಲ್ ಬಳಿಯ ಈದ್ಗಾ ಮೈದಾನದಲ್ಲಿ ಒಟ್ಟಿಗೆ ನಮಾಜ್ ಮಾಡಿದರು.
ಬಿಜೆಪಿ ಮುಖಂಡ ಎಚ್.ಆರ್. ಗವಿಯಪ್ಪ, ಕಾಂಗ್ರೆಸ್ ಮುಖಂಡರಾದ ರಾಜಶೇಖರ್ ಹಿಟ್ನಾಳ್, ವಿನಾಯಕ ಶೆಟ್ಟರ್, ನಿಂಬಗಲ್ ರಾಮಕೃಷ್ಣ, ಗುಜ್ಜಲ್ ನಾಗರಾಜ್ ಅವರು ಪ್ರಾರ್ಥನೆ ಸಲ್ಲಿಸಿ ಹೊರಬಂದ ಮುಸ್ಲಿಮರಿಗೆ ಕೈಕುಲುಕಿ ಶುಭ ಕೋರಿದರು.
ತಾಲ್ಲೂಕಿನ ಕಮಲಾಪುರ, ಮರಿಯಮ್ಮನಹಳ್ಳಿ, ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿಯಲ್ಲೂ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.